Saturday, May 30, 2020

ಎಲ್ಲಿದೆ ಸ್ವಾಮಿ ಸ್ವತಂತ್ರ!? *ವೆಂಕಟೇಶ ಸಂಪ,

ಎಲ್ಲಿದೆ ಸ್ವಾಮಿ ಸ್ವತಂತ್ರ!?
          *ವೆಂಕಟೇಶ ಸಂಪ,
ಒಂದೆಡೆ ಸ್ವೆಚ್ಚಾಚಾರ ಮತ್ತೊಂದೆಡೆ ಜೀತದಾಳತ್ವ!?
ಒಂದೆಡೆ ಹೈ ಪ್ರೋಫೈಲ್ ಕೇಸ್ ಗಳಲ್ಲಿ ಶಿಕ್ಷೆಯಾದರೂ ಕಾನೂನಿನ ಲೂಪ್ ಹೋಲ್ಸ್ ಬಳಸಿ ಅಪರಾಧಿಯಾದರೂ ಅಟ್ಟಹಾಸ ಮಾಡೋರು.ಮಾಡದ ತಪ್ಪಿಗೆ ಬಡತನದಲ್ಲಿ ಶೋಷಿತರಾಗಿ ನರಳುವ, ಜೀತದಾಳಾಗಿ ಬದುಕುವವರು! ಇನ್ನೊಂದೆಡೆ,
ಇದಾ ಸ್ವಾತಂತ್ರ್ಯ!?
ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಅನ್ನೋದು ಕೇವಲ ಜಾಹೀರಾತಿಗೆ ಸೀಮಿತವೇ!?
ಅತ್ಯಾಚಾರ,ಕೊಲೆ,ದರೋಡೆ ಮಾಡಿದರೂ ಸಮಾಜದ ಗಣ್ಯ ವ್ಯಕ್ತಿಯಂತೆ ಪೋಸ್ ಕೊಡ್ತಾ ಬದುಕುವ ಫಟಿಂಗರನ್ನು ನೋಡಿ ಸ್ವತಂತ್ರ ಅನ್ನಬೇಕೆ!?

ಚಿಕ್ಕದೊಂದು ಆದಾಯ ಧೃಡೀಕರಣ ಪತ್ರಕ್ಕಾಗಿ ತಿಂಗಳುಗಟ್ಟಲೇ ಸರ್ಕಾರಿ ಕಛೇರಿ ಅಲೆಯುವ ಹಳ್ಳಿಯ ವೃದ್ದನನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೇ!
ಅಧಿಕಾರ,ಹಣ ಇದೆ ಎಂಬ ಕಾರಣಕ್ಕೆ ಕಾನೂನನ್ನು ಮರೆತು ಸಾವಿರಾರು ಎಕರೆ ಜಮೀನನ್ನು ಮಂಜೂರು ಮಾಡೋದನ್ನು ನೋಡಿ ಸ್ವತಂತ್ರ ಬಂದಿದೆ ಎನ್ನಲೋ!?
ಒಂದೆಡೆ ಹೊಟ್ಟೆಗಿಲ್ಲದ ಸ್ಥಿತಿ,ಇನ್ನೊಂದೆಡೆ ಮೃಷ್ಟಾನ್ನ ಭೋಜನ!ಇದಾ ಸ್ವಾತಂತ್ರ್ಯ!?
ಅನ್ನ ನೀಡೋ ಅನ್ನದಾತನಿಗೆ ಬೆಳೆ ಬೆಳೆಯೋಕೆ ಸೌಲಭ್ಯ ಕೊಡದೆ,ಬೆಳೆದ ಬೆಳೆಗೂ ಮಾರ್ಕೇಟ್ ಕೊಡದ ನಾವು ಸ್ವತಂತ್ರಿಗಳೇ?
ಉದ್ಘಾಟನೆ ಆಗುವ ಮೊದಲೇ ಉರುಳಿ ಬೀಳುವ ಸರ್ಕಾರಿ ಕಟ್ಟಡಗಳನ್ನು ಕಟ್ಟುವ ನಾವು ಹೊಂಡ ಬಿದ್ದ ರಸ್ತೆ ಮುಚ್ಚಲು ಹತ್ತು ವರ್ಷ ತೆಗೆದುಕೊಳ್ಳುತ್ತೇವೆ.ದುಡ್ಡಿದ್ದವರ ಕೆಲಸ ಮಾಡೋಕೆ ಹಿಂದೆ ಮುಂದೆ ನೋಡದ ಅಧಿಕಾರಿ ವರ್ಗ ಬಡವರ ಕೆಲಸ ಮಾಡಲು ಕಾನೂನು ಪುಸ್ತಕ ತೆಗೆಯುತ್ತದೆ.ದೊಡ್ಡ  ಕಳ್ಳರನ್ನು ಹಿಡಿಯಲಾಗದ ದುರವಸ್ಥೆ ಪಿಕ್ ಪಾಕೇಟ್ ಮಾಡಿದವನನ್ನು ಒಳಗೆ ಹಾಕಿ ಪ್ರಚಾರ ಪಡೆಯುತ್ತದೆ.ದುಡ್ಡಿಲ್ಲದೆ ಮತ ಹಾಕದ ಜನ ಶ್ರೇಷ್ಟ ನಾಯಕನ ಕನಸು ಕಾಣುತ್ತದೆ.ರಾವಣರೇ ರಾಮನ ಮುಖವಾಡ ಧರಿಸಿದಾಗ ನಂಬೋದಾದ್ರು ಯಾರನ್ನ!?ಎಗ್ಗಿಲ್ಲದೆ ಏರುವ ಕ್ರೈಮ್ ಗಳಿಗೆ ಶಿಕ್ಷಿಸುವ ಬದಲು ವಿಳಂಬ ನೀತಿಗೆ ನ್ಯಾಯಾಂಗವೂ ಸ್ಥಬ್ದವಾಗಿಹೋಗಿದೆ.ಸುದ್ದಿ ಮಾಡಿ ಜನರನ್ನು ತಲುಪುವ ಬಹುತೇಕ ಮಾಧ್ಯಮಗಳು ಟಿಆರ್ ಪಿ ಯ ಬೆನ್ನುಹತ್ತಿದೆ.ವ್ಯವಸ್ಥೆಯ ಅಡಿಯಿಂದ ಮುಡಿಯವರೆಗೆ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಆವರಿಸಿದಾಗ ಆರೋಗ್ಯವಂತ ಸಮಾಜದ ಕಲ್ಪನೆ ಮೂಡುವುದಾದರೂ ಹೇಗೆ!?ಅರವತ್ತೊಂಬತ್ತು ವರ್ಷದ ಹಿಂದೆ ಅರ್ಧರಾತ್ರಿಯ ನಿದ್ರೆಗಣ್ಣಿನಲ್ಲಿ ಪಡೆದ ಸ್ವಾತಂತ್ರ್ಯವೆಂಬ ಅನರ್ಘ್ಯ ರತ್ನ ಮಂಗನ ಕೈಗೆ ಕೊಟ್ಟ ಮಾಣಿಕ್ಯ ಆಯಿತೆ?!ಅಂದು ಶಾಂತಿಕಾರಿಗಳು,ಕ್ರಾಂತಿಕಾರಿಗಳು,ಸಾಮಾನ್ಯರು ಹೋರಾಡಿದ್ದು ,ಸ್ವತಂತ್ರರಾಗಿದ್ದು ಹೊಳೆಯಲ್ಲಿ ಹುಣಸೆಹಣ್ಣು ತೇಲಿಬಿಟ್ಟಂತಾಯ್ತೆ!?
ಆಕಾಶಕ್ಕೆ ಕ್ಷಿಪಣಿ ಹಾರಿಸಿದ್ದೇವೆ,ಕೋಟ್ಯಾಂತರ ಬಂಡವಾಳ ತಂದಿದ್ದೇವೆ.ಬೆಳೆ ಬರಬೇಕಾದ ಜಾಗದಲ್ಲೆಲ್ಲಾ ವಿದೇಶಿ ದುಡ್ಡಿನ ಹೊಗೆ ಉಗುಳುವ ಕಾರ್ಖಾನೆ ನಿರ್ಮಿಸುತ್ತಿದ್ದೇವೆ.ಮನುಷ್ಯರು ಹುಟ್ಟಿದಂತೆ ಮನುಷ್ಯತ್ವ ಸಾಯುತ್ತಿದೆ.ವಾಹನಗಳು ಹೆಚ್ಚಿವೆ,ರಸ್ತೆ ಚಿಕ್ಕದಾಗಿದೆ.ನಾನು ನನ್ನದು ಎಂಬ ದಾಹದಲ್ಲಿ ಎಲ್ಲವೂ ಇಂಗಿ ಹೋಗಿ ಬರಡಾಗುತ್ತಿದೆ.ಸ್ವತಂತ್ರಕ್ಕೂ ಎರಡು ವರ್ಷ ಮೊದಲೇ ಅಪಕ್ವರಾದವರಿಗೆ ಸ್ವತಂತ್ರ ಸಿಕ್ಕರೆ ಏನಾಗುತ್ತದೆ ಎಂದು ಚರ್ಚಿಲ್ ಎಂಬ ಪುಣ್ಯಾತ್ಮ ಹೇಳಿದಂತೆ "power will go to the hands of rascals,rogues,and freebooters.
All indians leaders will be of low caliber and men of straw.
They will have sweet toungues and silly hearts.
They will fight amongst themselves for power and India will be lost in political squabbles.
A day would come when even air and water would be taxed in India."ಆಗಿ ಹೋಗಿದೆ.
ಆದರೂ ಉತ್ಸವ ಮಾಡಬೇಕಿದೆ.ಬಾವನೆಗಳೆಲ್ಲಾ ಟಿವಿ ದಾರಾವಾಹಿಗಳಿಗೆ ಸೀಮಿತವಾದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದು ಹಬ್ಬವಾಗಿ ಹೋಗಿದೆ ಅಷ್ಟೆ.ಪಕ್ಷ ಯಾವುದೇ ಇರಲಿ,ವ್ಯವಸ್ಥೆಗಳೇ ಹೊದ್ದು ಮಲಗಿದಾಗ ಎಳೆದು ಕೂರಿಸಬೇಕಾದ ಕರ್ತವ್ಯ ಜನಸಾಮಾನ್ಯರದ್ದು.
ಚೆಂದದ ಡ್ರೆಸ್ ಹಾಕಿ,ಬ್ಯಾಂಡ್ ಬಾರಿಸಿ,ಬಾವುಟ ಹಾರಿಸಿ,ಉದ್ದುದ್ದ ಭಾಷಣ ಮಾಡಿ,ಚಾಕಲೇಟ್ ತಿಂದು,ಅದಕ್ಕೂ ನಮ್ಮದೇ ತೆರಿಗೆಹಣ ಉಪಯೊಗಿಸಿ ಉತ್ಪಾದಕತೆ ಇಲ್ಲದೆ  ದಿನ ದೂಡಿದರೆ ಪ್ರಯೋಜನವೇನು!?ಮನುಷ್ಯತ್ವ ಮರೆತು ಜಾತಿ ಧರ್ಮದ ದೃಷ್ಟಿಯಲ್ಲಿ ಆಡಳಿತ ನೆಡೆದರೆ,ಪಾಸಿಟೀವ್ ಆಲೋಚನ ಕ್ರಮ ಮೂಡದೇ ಇದ್ದರೆ ಸ್ವಾತಂತ್ರೋತ್ಸವ ಅರವತ್ತೊಂಬತ್ತು ಅಲ್ಲ ಆರುಸಾವಿರದ ಒಂಭತ್ತು ವರ್ಷ ಕಳೆದರೂ ತೂತು ಬಿದ್ದ ಬಲೂನಿಗೆ ಗಾಳಿ ತುಂಬಿದಂತಾಗುತ್ತದೆ ಅಷ್ಟೆ.ಸ್ವತಂತ್ರ ಭಾರತದ ಸ್ವಚ್ಚ ಆಡಳಿತದ ಕನಸು ಕಂಡ ಮಹಾತ್ಮ ಗಾಂಧೀಜಿ,ಅಬ್ದುಲ್ ಕಲಾಂರ ಕನಸಿಗೆ ಇನ್ನಾದರೂ ಸಿಕ್ಕಬಹುದೇ ಮನ್ನಣೆ!?
ಸ್ವೇಚ್ಚಾಚಾರವಾಗದ ಸ್ವತಂತ್ರ ಉಳಿಯಬಹುದೇ!? ಹೆಮ್ಮೆಯಿಂದ ಶುಭಾಶಯ ಕೋರಬಹುದೇ!?
#ವೆಂಕಟೇಶಸಂಪ.
#ಓದಿಸಂಪದಸಾಲುಪತ್ರಿಕೆ   Venkatesha Sampa

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu