Monday, June 21, 2021

ಕೈಮುಗಿದು ಕೇಳುತ್ತೇನೆ,ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ

ಕೈಮುಗಿದು ಕೇಳುತ್ತೇನೆ,
ದಯವಿಟ್ಟು ಹೆಲ್ಮೆಟ್ ಧರಿಸಿ,ಜೀವ ಉಳಿಸಿಕೊಳ್ಳಿ....#ವೆಂಕಟೇಶಸಂಪ


ಸಂಪದ ಸಾಲು ಪತ್ರಿಕೆಯ ಕೆಲಸ ಮುಗಿಸಿ,ತೋಟಕ್ಕೆ ಬಂದು ಅಲ್ಲೊಂದಿಷ್ಟು ಕೆಲಸ ಮುಗಿಸಿ ವಾಪಸ್ಸು ಪೇಟೆ ಮನೆಗೆ ಕಾರಿನಲ್ಲಿ ಬರುತ್ತಿದ್ದೆ.
ಸಾಗರಕ್ಕೆ 3 ಕಿಲೋಮಿಟರ್ ಇರುವ ರಸ್ತೆಯ ತಿರುವಿನಲ್ಲಿ ಟಿವಿಎಸ್ ಬೈಕ್ ಜೊತೆ ಯಾರೋ ಒಬ್ಬ ತಲೆ ಒಡೆದು ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದನ್ನು ಕಂಡೆ.ರಸ್ತೆಯ ತುಂಬಾ ರಕ್ತ ಹರಿದಿತ್ತು.ಆತ ಆಕ್ಸಿಡೆಂಟ್ ಆಗಿ ಬಿದ್ದು ಬಹುಷಃ ಅರ್ಧ ಮುಕ್ಕಾಲು ಗಂಟೆಯೇ ಕಳೆದಿರಬಹುದು ಅನಿಸುತ್ತೆ.ಯಾವುದೋ ಲಾರಿಯೋ ದೊಡ್ಡ ವಾಹನ ಅಲ್ಲಿ ಬಿದ್ದ ವ್ಯಕ್ತಿಯ ತಲೆ ಮತ್ತು ಆತನ ಬೈಕ್ ಗೆ  ಕುಟ್ಟಿ ಹಿಟ್ ಎಂಡ್ ರನ್ ಆಗಿ ಹೋಗಿದೆ.ಮನುಷ್ಯತ್ವವನ್ನೇ ಕಳೆದುಕೊಂಡ ದುರುಳ ಹಿಟ್ ಎಂಡ್ ರನ್ ಮಾಡಿ ಪಲಾಯನ ಮಾಡಿದ್ದ.
ಮಾನವೀಯ ಮೌಲ್ಯಗಳೇ ನೆಲಕಚ್ಚಿದೆ ಎನ್ನುವುದಕ್ಕೆ ಉದಾಹರಣೆಯಂತಿತ್ತು ಇಂದಿನ ಘಟನೆ. ನಾ ಅಲ್ಲಿ ಬರುವ  ಮೊದಲು ತುಂಬಾ ವಾಹನಗಳು ಓಡಾಡಿದೆ.ಆದರೂ ಆ ಆಕ್ಸಿಡೆಂಟ್ ದೂರದಿಂದ ನೋಡಿ ಬಹುತೇಕ ಜನ ನಮಗ್ಯಾಕೆ ಈ ಗೊಡವೆ ಅಂತ ಓಡಿದ್ದಾರೆ.ಹಾಗೆ ಮಾಡೋಕೆ ಕಾರಣ ಹಿಂದೆ ಪೋಲೀಸ್ ನವರು ವಿಷಯ  ತಿಳಿಸಿದವರಿಗೆ,ಕಷ್ಟದಲ್ಲಿದ್ದವರಿಗೆ ನೆರವಾದವರಿಗೆ ಹೆದರಿಸಿದ ಘಟನೆ ಕಾರಣವಿರಬಹುದು. ಆದರೆ ಈಗ ಸುಪ್ರೀಮ್ ಕೋರ್ಟ್ ನ ಆದೇಶವಿದೆ.ಆಕ್ಸಿಡೆಂಟ್ ಆದಾಗ ಅವರಿಗೆ ಆರೈಕೆ ಮಾಡಿದವರಿಗೆ ಮತ್ತು ವಿಷಯ ತಿಳಿಸಿದವರಿಗೆ  ಯಾವುದೇ ಸಮಸ್ಯೆ ಮಾಡಬಾರದು ಎಂದು.
ಆದರೂ ನಮ್ಮ ಜನ ಬದಲಾಗಿಲ್ಲ.ಈಗಲೂ ಪೋಲಿಸ್ ಕಾರ್ಯವೈಖರಿಗೆ ಹೆದರಿ ಆಕ್ಸಿಡೆಂಟ್ ಆದವರಿಗೆ ಸಹಾಯ ಮಾಡಲು ಹೆದರುತ್ತಾರೆ.
ನಾನು ನಿಲ್ಲಿಸಿ,ಪೋಲಿಸ್ ಸ್ನೇಹಿತರಿಗೆ,ಅಂಬುಲೆನ್ಸ್ ಗೆ ಕರೆ ಮಾಡುವ ಪ್ರಯತ್ನದಲ್ಲಿದಾಗ ಹತ್ತಾರು ಜನ ಸಹಾಯಕ್ಕೆ ಬಂದರು. ಕೂಡಲೇ ವಿಳಾಸ ನೀಡಿದೆ.ಅಂಬುಲೆನ್ಸ್ ಬಂತು....ಆದರೆ ಸ್ಪಾಟ್ ಡೆತ್ ಅಂತ ಅದು ಅವನನ್ನು ಒಯ್ಯಲಿಲ್ಲ.ಅಷ್ಟೊತ್ತಿಗೆ ಸತ್ತ ವ್ಯಕ್ತಿಯ ಊರಿನವರು ಬಂದರು.ಪೋಲೀಸ್ ಕೂಡ ಬಂದರು.ಮುಂದಿನ ಕೆಲಸ ನೆಡೆಯಿತು.ಆದರೆ ಆ ಘಟನೆಯಲ್ಲಿ ಆ ವ್ಯಕ್ತಿಗೆ ತಲೆಗೆ ಹೊಡೆತ ಬಿದ್ದು ರಕ್ತ ಹರಿದ್ದು ಬಿಟ್ಟರೆ ದೇಹದ ಎಲ್ಲೂ ಪೆಟ್ಟಾಗಿರಲಿಲ್ಲ. ಆತ ಹೆಲ್ಮೆಟ್ ಹಾಕಿದ್ದರೆ ಬದುಕಿರುತ್ತಿದ್ದ.

ಛೇ ಜನಗಳೇಕೆ ಹೀಗೆ?
ಯಾವುದೇ ದ್ವಿಚಕ್ರ ವಾಹನದಲ್ಲಿ ಓಡಾಡುವಾಗ ಸವಾರನೇ ಆಗಿರಲಿ,ಹಿಂಬದಿ ಸವಾರನೇ ಆಗಿರಲಿ ಹೆಲ್ಮೆಟ್ ಧರಿಸಲೇಬೇಕು.ಎಟ್ಲೀಷ್ಟು ಪ್ರಾಣವಾದರೂ ಉಳಿಯುತ್ತಿತ್ತು.
ಪೋಲಿಸರು ಕಂಡ ಕೂಡಲೇ ಚಿಕ್ಕದೊಂದು ಟೋಪಿ ತರಹ ಹೆಲ್ಮೆಟ್ ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡಬೇಡಿ.ನಿಮ್ಮನ್ನು ನಂಬಿ ನಿಮ್ಮ ಕುಟುಂಬವಿರುತ್ತದೆ.ನಿಮ್ಮನ್ನು ನಂಬಿ ನಿಮ್ಮನ್ನು ಇಷ್ಟಪಡುವ ಮಕ್ಕಳು,ಹೆಂಡತಿ,ಸ್ನೇಹಿತರು,ನೆಂಟರು ಇದ್ದಾರೆ.ಇಲ್ಲೇ ಸ್ವಲ್ಪ ದೂರ ಅಷ್ಟೆ ಹೆಲ್ಮೆಟ್ ಬೇಡ ಎಂಬ ಉದಾಸೀನ ಬೇಡ.ಒಂದೇ ಒಂದು ಕ್ಷಣದ ನಿರ್ಲಕ್ಷ್ಯ ,ಒಂದೇ ಒಂದು ತಪ್ಪು, ಜೀವನದ ಸರ್ವಸ್ವವನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ.ಕೈ ಮುಗಿದು ಕೇಳಿಕೊಳ್ಳುತ್ತೇನೆ.ಬೈಕ್ ಓಡಿಸುವವರು,ಹಿಂಬದಿ ಸವಾರರು ಹೆಲ್ಮೆಟ್ ಧರಿಸಿ.ಜೀವ ಉಳಿಸಿಕೊಳ್ಳಿ. ದೊಡ್ಡ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ವೇಗಕ್ಕೆ  ದಯವಿಟ್ಟು ಮಿತಿ ಇರಲಿ.ಆ ಲಾರಿಯ ಹುಚ್ಚು ಡ್ರೈವಿಂಗ್ ಗೆ ಮತ್ಯಾರೋ ಅಮಾಯಕ ಬಲಿಯಾಗಿದ್ದನ್ನು ಕಂಡಾಗ ಮನಸ್ಸು ಮರುಗುತ್ತದೆ.
ದಾರಿಯಲ್ಲಿ ಎಲ್ಲೇ ಆಕ್ಸಿಡೆಂಟ್ ನಂತಹ ಅಪಾಯಗಳಾದಾಗ ಪೋಟೋ,ವೀಡಿಯೋ ತೆಗೆಯುತ್ತಾ ಕೂರಬೇಡಿ.ಪೋಲಿಸರಿಗೆ ಹೆದರಿ ಸೇವೆ ಮಾಡದೇ ಸುಮ್ಮನಿರಬೇಡಿ.ಅಂಬುಲೆನ್ಸ್ 108 ಅಥವಾ ಪೋಲಿಸ್ 112 ಕ್ಕೆ ಕರೆಮಾಡಿ.
ಮನುಷ್ಯತ್ವ ಹೊಂದಿದ ಮಾನವರಾಗೋಣ.ಜವಾಬ್ದಾರಿಯುತ ಮನುಷ್ಯರಾಗೋಣ.
ಜೀವ ಮುಖ್ಯ....ಮನುಷ್ಯತ್ವ ಮುಖ್ಯ.
#ವೆಂಕಟೇಶಸಂಪ
ಓದಿಸಂಪದಸಾಲುಪತ್ರಿಕೆ
sampadasaalu@gmail.com
Sampadasaalu.blogspot.com
9448219347

Friday, June 11, 2021

ಸರ್ವ ಬಣ್ಣ ಮಸಿ ನುಂಗಿತ್ತು.......ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ... ವೆಂಕಟೇಶ ಸಂಪ

ಸರ್ವ ಬಣ್ಣ ಮಸಿ ನುಂಗಿತ್ತು.......
ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ...
                       ವೆಂಕಟೇಶ ಸಂಪ


ಜೀವನವೇ ಹಾಗೆ....ಯಶಸ್ಸಿನ ಉತ್ತುಂಗಕ್ಕೆ ಪ್ರತಿ ಕ್ಷಣವೂ ಒದ್ದಾಡಬೇಕು..ಪರಿಶ್ರಮ ಪಡಬೇಕು.ಜೊತೆಗೆ ಅದೃಷ್ಟವೂ ಸೇರಬೇಕು.ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನಿಟ್ಟು ಸೌಧವೊಂದನ್ನು ನಿರ್ಮಿಸಿದಂತೆ ಪ್ರತಿ ಸಾಧನೆಗೆ,ಪ್ರತಿ ಯಶಸ್ಸಿಗೆ ತಪಸ್ಸನ್ನು ಮಾಡಲೇಬೇಕು.ಹೀಗೆ ಗಳಿಸಿದ ಯಶಸ್ಸು,ವರ್ಚಸ್ಸು,ಸಾಮಾಜಿಕ ಸ್ಥಾನ ಮಾನ ಬಹುಬೇಗ ನೀರುಪಾಲಾಗಬಲ್ಲದು. ಗಳಿಸಿದ ಹಣ ಅಥವಾ ಆಸ್ಥಿ ಉಳಿಯಬಹುದು.ಆದರೆ ಗಳಿಸಿದ ಹೆಸರು ಬಹುಬೇಗ ಹಾಳಾಗಬಲ್ಲದು.ಮತ್ತೆ ಅದನ್ನು ಸರಿ ಮಾಡಿಕೊಳ್ಳಲು ಮತ್ತೊಂದು ಬೃಹತ್ ಸಾಮಾಜಿಕ ಯಜ್ಞದಂತೆ ಕೆಲಸ ಮಾಡಬೇಕಾಗುತ್ತದೆ.

ಸಾಮಾಜಿಕ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ವಿಚಾರ ಬಹಳ ಮುಖ್ಯ .ಯಾಕೆಂದರೆ ಅವರಿಗೆ ಪ್ರತಿ ಕ್ಷಣವೂ ಮುಳ್ಳಿನ ಹಾಸಿನ ಮೇಲೆ ಪ್ರಯಾಣ ಮಾಡಿದಂತೆ.
ಸಾವಿರ ಜನಕ್ಕೆ ಸರಿ ಎನಿಸುವಂತೆ ಮಾಡಿದರೂ ಒಬ್ಬನಿಗೆ ತಪ್ಪಾಗಿ ಕಂಡರೆ ಅದನ್ನೂ ನಿರ್ಲಕ್ಷಿಸುವಂತಿಲ್ಲ.ಯಾಕೆಂದರೆ ಆ ಒಬ್ಬನೇ ನಾಳೆಯ ಸಾವಿರ ಜನರ ಮನಸ್ಥಿತಿ ಬದಲಿಸಬಲ್ಲ.
ಹಾಗಾಗಿ ಎಷ್ಟು ಸೂಕ್ಷ್ಮವಾಗಿದ್ದರೂ ಸಾಕಾಗುವುದಿಲ್ಲ.


ಇನ್ನೊಂದು ಬಹಳ ಮುಖ್ಯವೆಂದರೆ ಇದು ಆಧಿನಕತೆಯ ಜಗತ್ತು.ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾಗಿದೆ.
ಚಪ್ಪಾಳೆಗಾಗಿ ನಿನ್ನೆ ಆಡಿದ ಮಾತನ್ನು ನೀವೂ ಮರೆಯಬಹುದು.ಆದರೆ ಅದನ್ನು ಜನ ಮರೆತಿರುವುದಿಲ್ಲ. ಮತ್ತೆಲ್ಲೋ ದಾಖಲಾಗಿ ಪುರಾವೆಯೊಂದು ತಲೆಯೆತ್ತಿ ನಿಂತಿರುತ್ತದೆ.

ಚಪ್ಪಾಳೆಗಾಗಿ ಏನೇನೋ ಮಾತಾಡಬಾರದು.ನಾನು ನಾಳೆ ಅದಕ್ಕೆಷ್ಟು ಉತ್ತರದಾಯಿತ್ವನಾಗಿರಬಲ್ಲೆ ಎಂಬ ಪ್ರಜ್ಞೆ ಇರಬೇಕು.

ಒಂದು ಮಾತು,ಒಂದು ನಡವಳಿಕೆ,ಒಂದು ಘಟನೆ ನಮ್ಮನ್ನು ಎತ್ತರಕ್ಕೇರಿಸಬಲ್ಲದು,ಅದೇ ಪಾತಾಳಕ್ಕಿಳಿಸಬಲ್ಲದು.ಹಾಗಾಗಿ ಪ್ರತಿಕ್ಷಣದ ಜಾಗರೂಕತೆಯೇ ಇದಕ್ಕೆ ಪರಿಹಾರ.

ಭರವಸೆ ಕೊಡುವ ಮುನ್ನ ಎಚ್ಚರವಿರಲಿ:
ಯಾರೇ ಆಗಲಿ ನಮ್ಮ ಕೈಲಿ ಸಾಧ್ಯವಾಗಬಹುದಾದಕ್ಕೆ ಮಾತ್ರ ಭರವಸೆ ನೀಡಬೇಕು ಮತ್ತು ಅದನ್ನು ಈಡೇರಿಸಲು ಶ್ರಮಿಸಿ ಯಶಸ್ವಿಯಾಗಬೇಕು.

ನನಗೆ ಗೊತ್ತಿದ್ದ ಪ್ರಭಾವಿ ಭಾಷಣಕಾರ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದರು.ಆದರೆ ಇಸಂಗೆ ಒಳಗಾಗಿ,ಯಾರನ್ನೋ ಹೊಗಳುವ ಬರದಲ್ಲಿ ಚಂದಮಾಮ ಕತೆಯಂತೆ ಏನೇನೋ ಹೇಳಿದ್ದರ ಪರಿಣಾಮ ಜೋಕರ್ ತರಹ ಟ್ರೋಲ್ ಆಗಿದ್ದನ್ನು ಕಂಡಿದ್ದೇನೆ.
ಮತ್ತೊಬ್ಬ ಪ್ರಭಾವಿ ನಾಯಕರು ಸುಳ್ಳು ಸುಳ್ಳು ಭಾಷಣ ಮಾಡಿದ ಪರಿಣಾಮ ನಗೆಪಾಟಲಾಗಿದ್ದನ್ನು,ಒಂದೇ ದಿವಸದಲ್ಲಿ ತನ್ನ  ವರ್ಚಸ್ಸನ್ನು ಪಾತಾಳಕ್ಕಿಳಿಸಿಕೊಂಡಿದ್ದನ್ನೂ ಗಮನಿಸಿದ್ದೇನೆ.

ಹಾಗಂತ ಇವರು ಕೆಲಸ ಮಾಡಿದ್ದರು.ಆದರೆ ಇವರ ಸುಳ್ಳು ಮತ್ತು ಟೊಳ್ಳು ಮಾತು  ಮಾಡಿದ ಕೆಲಸವನ್ನು ನಗಣ್ಯವಾಗಿಸಿಬಿಟ್ಟಿತು.

ಜನಸಾಮಾನ್ಯರ ಜೀವನದಲ್ಲಿ ಕೂಡ ಹೀಗೆಯೇ,
ಮಾತು,ನೆಡೆ,ಉಪಕಾರ ಮನೋವೃತ್ತಿ,ಕೆಲಸದ ಬದ್ಧತೆ,ಮಾತು ಕೃತಿ ಸಂಬಂಧ,ಇವೆಲ್ಲವೂ ಪ್ರತಿ ಕ್ಷಣವೂ ಬೇಕೇ ಬೇಕು...ಕಾನೂನಿಗಿಂತ ಮಾನವೀಯತೆ ಹಾಗೂ  ನಂಬಿದವರಿಗೆ ಸಹಾಯಕ್ಕಾಗಿ ಇರಬೇಕಾದ ಇಚ್ಛಾಶಕ್ತಿ ಬಹಳ ಮುಖ್ಯ ಎಂದು ವರ್ತಿಸಿದರೆ ಆ ವ್ಯಕ್ತಿತ್ವ ಹೊಳಪನ್ನು ಪಡೆಯುತ್ತದೆ.
ಒಳ್ಳೆಯವರಂತೆ ನಟಿಸಿದಾತ ಹೆಚ್ಚು ಕಾಲ ಉಳಿಯಲಾರ....ನಿಜವಾಗಿಯೂ ಒಳ್ಳೆಯವನಾದರೆ ಉಳಿಯಬಲ್ಲ.
ಅಭಿವೃದ್ಧಿ ಎಂದು ಭಾಷಣ ಮಾಡುವುದಕ್ಕೂ,ನಿಜವಾದ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ.
ನಿಜವಾದ ಅಭಿವೃದ್ಧಿ ಮಾಡಿದಾತ ತಡವಾದರೂ ಗಟ್ಟಿಯಾಗಿ ಉಳಿಯುತ್ತಾನೆ.ಜೊಳ್ಳು ತೂರಿಹೋಗಿ ಗಟ್ಟಿ ಕಾಳು ಉಳಿದಂತೆ....ಎಚ್ಚರ ತಪ್ಪದೇ ನಾವು ನಾವಾಗಿದ್ದರೆ ಮಾತ್ರ ಉಳಿವು....ಇಲ್ಲದಿದ್ದರೆ ಕುಂಬಾರನಿಗೆ ವರುಷ...ದೊಣ್ಣೆಗೆ ನಿಮಿಷವೆಂಬಂತೆ,ಸರ್ವ ಬಣ್ಣ ಮಸಿ ನುಂಗಿತ್ತು ಎಂಬಂತಾಗುತ್ತದೆ....
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu