Thursday, January 19, 2017

ಗಾಂಧಿಯ ಮೂಕ ಅಳಲು ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!? #ವೆಂಕಟೇಶ ಸಂಪ

ಗಾಂಧಿಯ ಮೂಕ ಅಳಲು
ದಿಕ್ಕಾರವಿರಲಿ ಈ ವಿಐಪಿ ಸಂಸ್ಕೃತಿಗೆ!?
                      #ವೆಂಕಟೇಶ ಸಂಪ
                 # ಓದಿಸಂಪದಸಾಲುಪತ್ರಿಕೆ

ಆರು ತಿಂಗಳ ಹಿಂದೆ! ಅಂದು ನಮ್ಮ ಸಂಪದ ಕೃಷಿ ಉತ್ಪನ್ನವನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಬಗ್ಗೆ ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿನ ಮಿತ್ರ ಕಂಪನಿಯೊಂದರ ಜೊತೆ ಚರ್ಚಿಸಿ ವಾಪಸ್ಸು ಹೊರಟಿದ್ದೆ. ನೆಡೆದುಕೊಂಡು ಹೊರಟ ನನಗೆ ವಿಶ್ವೇಶ್ವರಯ್ಯ ಟವರ್‌ಗೆ ಹೋಗಿ ವಾರ್ತಾ ಇಲಾಖೆ ತಲುಪಬೇಕಿತ್ತು.
ಸ್ವಲ್ಪ ದೂರ ಬರುವ ಮೊದಲೇ ಎಲ್ಲೆಡೆ ಪೋಲಿಸ್ ಸರ್ಪಗಾವಲು ಕಂಡಿತು. ಅರೇ ಇದೆನಪ್ಪಾ ಇಷ್ಟೊಂದು ಪೋಲಿಸ್ ಅನ್ನುತ್ತಾ ಸಿಗ್ನಲ್ ಹತ್ತಿರ ನಿಂತಿದ್ದೆ. ಯಾವ ವಾಹನಗಳು ಚಲಿಸದಂತೆ ನಿರ್ಬಂದ ಹೇರಿದ್ದರು. ಪೋಲಿಸ್ ಅಧಿಕಾರಿ ಮತ್ತು ಕೆಲವು ಪೇದೆಗಳು ನಿಂತಿದ್ದರು. ಅವರ ವೈರ್ ಲೆಸ್ ಏನೇನೋ ಬಡಿದುಕೊಳ್ಳುತ್ತಿತ್ತು. ಸಿಗ್ನಲ್‌ಗೆ ನಿಂತ ಜನ ಮತ್ತು ವಾಹನದವರು ಹಿಡಿಶಾಪ ಹಾಕುತ್ತಾ, ಗೊಣಗುತ್ತಾ ನಿಂತಿದ್ದರು. ನನಗೂ ಒಂಥರಾ ಕಸಿವಿಸಿ, ಇರ್ರಿಟೇಶನ್ ಆಗ್ತಾ ಇತ್ತು. ಸಿಗ್ನಲ್ ದಾಟೋಕು ?ತಡ್ಯಪ್ಪಾ ಹೋಗ್ಬೇಡ ಸಿ.ಎಂ ಸಾಹೇಬ್ರು ಬರ್ತಿದಾರೆ, ಇರಪ್ಪಾ ಈ ಸೈಡ್‌ಗೆ ?ಅವಾಜು ಹಾಕಿದ ಪೋಲಿಸ್ ಪೇದೆ. ಇರಲಿ ಬಿಡು ಈತನ ಸಂಸ್ಕಾರವೇ ಅಂತದ್ದಿರಬೇಕು, ಈ ತರ ಮಾತಾಡ್ತಾನೆ ಅಂದುಕೊಂಡೆ. ದೊಡ್ಡ ಸೈರನ್ ಮಾಡುತ್ತಾ ಬಂದ ವಾಹನ ಟ್ರಾಫಿಕ್ ದಾಟುವ ಬರದಲ್ಲಿ ಬಡಿದುಕೊಳ್ಳುತ್ತಿತ್ತು. ಆ ಕಡೆ ತಿರುಗಿದೆ. ಅಂಬುಲೆನ್ಸ್ ಜೋರಾಗಿ ಬಡಿದುಕೊಳ್ಳುತ್ತಿತ್ತು. ನನ್ನ ಹೃದಯವೇ ಬಡಿದುಕೊಂಡಂತೆ ಭಾಸವಾಗತೊಡಗಿತು. ಐದು ನಿಮಿಷವಾದರೂ ಈ ಪೋಲಿಸ್‌ನೋರು ಸಿಗ್ನಲ್ ಕ್ಲಿಯರ್ ಮಾಡಲಿಲ್ಲ. ನನಗೆ ಸಿಟ್ಟು ನೆತ್ತಿಗೇರಿತ್ತು. ಪೋಲಿಸ್ ಅಧಿಕಾರಿಯ ಬಳಿ ಹೋಗಿ ವಿನಂತಿಸಿಕೊಂಡೆ. ಸಾರ್ ಅಂಬುಲೆನ್ಸ್ ಬಂದಿದೆ. ಪಾಪ ಯಾರೋ ಸಾಮಾನ್ಯ ರೋಗಿ ಬದುಕಿಕೊಳ್ಳಲಿ. ಪ್ಲೀಸ್ ಸಿಗ್ನಲ್ ಬಿಡಿ ಸಾರ್, ಅಂದೆ ಕೇಳಲಿಲ್ಲ. ಹೋಗಯ್ಯಾ ನೀನೇನು ನಂಗೆ ಹೇಳೋದು, ಸಿ.ಎಂ ಬರ್ತಿದಾರೆ. ಅವರು ಮುಖ್ಯ, ಸೆಕ್ಯುರಿಟಿ ಸರಿ ಇಲ್ದಿದ್ರೆ ನೋಟಿಸ್ ಕೊಡ್ತಾರೆ ಹೋಗಪ್ಪಾ, ಅಂದ. ನನಗೂ ಉರಿ ಹತ್ತಿತು. ?ನಾನು ಪತ್ರಕರ್ತ ಕಣ್ರಿ? ಅಂದೆ. ಆತನ ಮುಖಭಾವ ಸ್ವಲ್ಪ ಬದಲಾದಂತೆ ಕಂಡಿತು.
ಎದೆ ದಗದಗ ಅನ್ನತೊಡಗಿತ್ತು. ?ರೀ ಯಾವನ್ರೀ ಸಿ.ಎಂ? ನಾವು ಕಾಮನ್‌ಮ್ಯಾನ್‌ಗಳು, ನಮ್ಮಿಂದಾಗಿ ಅವರು ಸಿಎಂ ಆಗಿದ್ದು. ನಮ್ಮ ವೋಟ್ಗಳಿಂದಲೇ ಅವರು ಅಧಿಕಾರಕ್ಕೆ ಬಂದಿದ್ದು. ಸಾಕು ನಿಲ್ಸ್ರಿ ನಿಮ್ಮ ಆಟನಾ, ಆ ರೋಗಿ ಸಾಯ್ತಾ ಇದಾನೆ. ಅಂಬುಲೆನ್ಸ್‌ಲ್ಲಿ. ಕೂಗ್ತಾ ಇದೆ ಆ ರೀತಿ. ಮಾನವೀಯತೆ ಇಲ್ಲದ ನಿಮ್ ರೂಲ್ಸಗೆ ದಿಕ್ಕಾರ ಕಣ್ರಿ. ಈಗ ಬಿಡ್ರಿ. ನನ್ನ ಕೂಗಾಟ ಜೋರಾಗಿತ್ತು. ಸುತ್ತ ಮುತ್ತ ಇದ್ದ ಕೆಲವು ಜನ ಅಲ್ಲೇ ಗೊಣಗಿದರು. ಕೆಲವು ಜನ ಬಿಡಿ ಸಾರ್ ಅಂತ ಉದ್ಗಾರ ಎಳೆದರು. ಇನ್ನುಳಿದವರು ನಮಗ್ಯಾಗೆ, ಆ ಅಂಬುಲೆನ್ಸ್‌ನಲ್ಲಿರೋ ರೋಗಿ ಬದುಕಿದ್ರೆ ತನಗೇನು ಲಾಭ ಅಂದುಕೊಂಡು ನಮ್ಮ ಗಲಾಟೆ ನೋಡ್ತಾ ಇದ್ರು. ಮತ್ತೊಮ್ಮೆ ಆ ಪೋಲಿಸ್ ಅಧಿಕಾರಿಗೆ ಹೇಳಿದೆ, ?ರೀ ನಿಮ್ಮವರಿಗೇ ಹೀಗಾದ್ರೆ, ಅಂಬುಲೆನ್ಸ್‌ನಲ್ಲಿ ನಿಮ್ಮವರೆ ಇದ್ದರೆ ನೀವು ಇದೇ ತರಹ ಕಾನೂನು ಹೇಳ್ತಿದ್ರಾ!? ಅಥವಾ ಬಿಡ್ತಿದ್ರಾ? ಹೇಳ್ರಿ ಅಂದೆ. ಆತ ಗೌರವವಾಗಿ ಸಾರ್ ಹೋಗಿ ಸಾರ್ ಮೇಲಾಧಿಕಾರಿ ನೋಟಿಸ್ ಕೊಡ್ತಾರೆ. ಸಿ.ಎಂ ಸೆಕ್ಯುರಿಟಿ ಸರಿ ಮಾಡ್ಲಿಲ್ಲಾ ಅಂತ. ಪ್ಲೀಸ್ ಒತ್ತಾಯ ಮಾಡ್ಬೇಡಿ ಕೈ ಮುಗಿತೀನಿ ಅಂದ. ನಂಗೆ ಸಿಟ್ಟು ನೆತ್ತಿಗೇರಿತ್ತು. ನೀನು ಕೈ ಮುಗಿದು ನನಗೇನು ಆಗ್ಬೇಕಿದೆ. ಆ ಅಂಬುಲೆನ್ಸ್‌ನ ರೋಗಿ ಸರಾಗವಾಗಿ ಆಸ್ಪತ್ರೆಗೆ ಹೋಗ್ಬೇಕಷ್ಟೆ ಅಂದೆ. ತಕ್ಷಣ ಹಿರಿಯ ಪೋಲಿಸ್ ಅಧಿಕಾರಿಗೆ ನಾನೇ ಕರೆ ಮಾಡಿದೆ ಘಟನೆ ವಿವರಿಸಿದೆ. ನಮ್ಮ ಸಂಪದ ಸಾಲು ಪತ್ರಿಕೆಯ ಜೊತೆ ವಾರ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವಾಗಲೇ ಪರಿಚಿತರಾಗಿದ್ದ ಆಫೀಸರ್ ಅವರು. ಈಗ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದರು. ತಕ್ಷಣ ಈ ಅಧಿಕಾರಿಗೆ ಪೋನ್ ಕೊಡುವಂತೆ ಹೇಳಿದರು, ಪೋನ್ ಕೊಟ್ಟೆ. ಅವರು ಹೇಳಿದ್ದಕ್ಕೆಲ್ಲಾ ಹೂಂ ಅಂದ ಈ ಅಧಿಕಾರಿ ಕೂಡಲೇ ಅಂಬುಲೆನ್ಸ್ ಮುಂದೆ ಹೋಗುವಂತೆ ಸಹಕರಿಸಿ ಸಿಗ್ನಲ್ ಫ್ರೀ ಮಾಡಿದ್ದಲ್ಲದೆ ಆ ಅಂಬುಲೆನ್ಸ್ ಜೊತೆ ರಸ್ತೆಯಲ್ಲಿ ಟ್ರಾಫ್ಹಿಕ್ ಆಗದಂತೆ ನೋಡಿಕೊಳ್ಳಲು ಒಂದು ಪೋಲಿಸ್ ವಾಹನವನ್ನು ಕಳಿಸಿಕೊಟ್ಟರು.
ಸ್ವಲ್ಪ ಸಮಾದಾನವಾಯಿತು. ಆದರೂ ಈ ವಿ.ಐ.ಪಿ ಸಂಸ್ಕೃತಿಯ ಬಗ್ಗೆ ಅಸಹಾಯಕತೆಯ ಜೊತೆ ಸಿಟ್ಟು ಬರುತ್ತಿತ್ತು. ನೋಡೋಣ ಸಿಎಂ ವಾಹನ ಎಷ್ಟೊತ್ತಿಗೆ ಬರಬಹುದು ಅಂತ ಇಲ್ಲೆ ಕಾಯೋಣ ಅಂದುಕೊಂಡು ಕುಳಿತೆ. ಪಕ್ಕದಲ್ಲೇ ಇದ್ದ ಪೋಲಿಸ್ ಆಫೀಸರ್‌ಗೆ ಭಯ. ಸಾರ್ ನಿಮ್ಮನ್ನು ಎಲ್ಲಿಗಾದ್ರೂ ಡ್ರಾಪ್ ಮಾಡಸ್ಲಾ ಅಂದರು. ನೋ ಸಾರ್ ನಿಮ್ಮ ಸಿಎಂ ಎಷ್ಟೋತ್ತಿಗೆ ಬರ್ತಾರೆ ನೋಡಿಯೇ ಹೋಗ್ತೀನಿ ಅಂದೆ. ಸುಮಾರು ಅರ್ದಗಂಟೆಗೂ ಲೇಟಾಗಿ ಸಿಎಂ ವಾಹನಗಳು ಸೈರನ್ ಮಾಡುತ್ತಾ ಪಾಸ್ ಆಯಿತು.ಅದಾಗಿ ಐದು ಮಿಷದ ನಂತರ ಸಿಗ್ನಲ್‌ನಲ್ಲಿ ಜನ ಸಾಮಾನ್ಯರ ವಾಹನಗಳಿಗೆ ಅನುವು ಮಾಡಿಕೊಟ್ಟರು. ಗೊಣಗುತ್ತಾ, ಮೌನದಲ್ಲಿ ಎಲ್ಲರೂ ಹೊರಟುಹೋದರು. ನಾನು ಮಾತ್ರಾ ಏಕಾಂಗಿಯಾಗಿ ಸಿಗ್ನಲ್ ದಾಟಿ ನೆಡೆದುಕೊಂಡು ಹೊರಟೆ. ಇಡೀ ತಲೆಯಲ್ಲಿ ಬರೀ ಈ ವಿಐಪಿ ಸಂಸ್ಕೃತಿಯ ಬಗ್ಗೆ ಅಸಹನೆಯ ಹೊಯ್ದಾಟ ನೆಡೆಯುತ್ತಿತ್ತು. ದೊಡ್ಡವರ ಹೆಸರಲ್ಲೇಕೆ ಜನ ಸಾಮಾನ್ಯರ ಮೇಲೆ ಪ್ರಹಾರ!? ನಮ್ಮಿಂದಲೇ ಗೆದ್ದ ಈ ಮಂದಿಗಳ ಸೆಕ್ಯುರಿಟಿ ಹೆಸರಲ್ಲಿ ಸಾಮಾನ್ಯರನ್ನು, ವೃದ್ದರನ್ನು, ಹೆಂಗಸರನ್ನು, ಮಕ್ಕಳನ್ನು ಟೆರರಿಸ್ಟ್ ತರಹ ನೋಡೋ ಪೋಲಿಸ್ ಬುದ್ದಿ. ಅದನ್ನು ಕಂಡೂ ಪ್ರತಿಭಟಿಸದ ಜನ, ಗೊಣಗುತ್ತಾ ವ್ಯವಸ್ತೆಗೆ ಅಡ್ಜಸ್ಟ್ ಆಗೋ ರೀತಿ, ಮನುಷ್ಯ ಮನುಷ್ಯರ ನಡುವೆಯೇ ಉಂಟಾದ ಕಂದಕ, ಈ ತರಹದ ಸನ್ನಿವೇಶಗಳೇ ಕಣ್ಣಿಗೆ ಕಟ್ಟುತ್ತಿತ್ತು. ಯಾರೋ ದಬ್ಬಿದಂತೆ ನೆಡೆದು ಬರುತ್ತಿದ್ದೆ. ಕೈಲಿ ಕೋಲು ಹಿಡಿದ ಗಾಂಧಿ ಪ್ರತಿಮೆ ಮೂಕವಾಗಿ ಅಳುತ್ತಿತ್ತು. ನಾನು ಮೂಕನಾಗಿ ಅದನ್ನು ನೋಡುತ್ತಾ ಕುಳಿತೆ.
Article by ವೆಂಕಟೇಶ ಸಂಪ #ಓದಿಸಂಪದಸಾಲುಪತ್ರಿಕೆ

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu