Saturday, January 14, 2017

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ! article by venkatesha sampa

ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

ಅದು ಸುಂದರವಾದ ಪ್ರಪಂಚ! ಅಲ್ಲಿ ಬಡತನವೇ ಇಲ್ಲ, ರೋಗಿಗಳಿಲ್ಲದ ಕಾರಣ ಆಸ್ಪತ್ರೆಗಳಿಲ್ಲ, ಡಾಕ್ಟರ್‌ಗಳಿಲ್ಲ. ಕ್ರೈಂಗಳೇ ಇಲ್ಲದ ಕಾರಣ ಪೋಲೀಸ್ ಠಾಣೆ ಮತ್ತು ಕೋರ್ಟ್‌ಗಳಿಲ್ಲ, ವಕೀಲರಿಲ್ಲ, ನ್ಯಾಯಾಧೀಶರುಗಳಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ನೋಡುವ, ಅದನ್ನು ಫೀಲ್ ಮಾಡುವ ಟೆಕ್ನಾಲಜಿ ಇರುವುದರಿಂದ ಓಡಾಡಲು ವಾಹನಗಳ ಅವಶ್ಯಕತೆಯಿಲ್ಲ. ಕುಳಿತಲ್ಲಿಯೇ ಎಲ್ಲವನ್ನೂ ಕಲಿಯುವ ಆಡಿಯೋ, ವಿಡಿಯೋ , ರೆಡಿಮೇಡ್ ವ್ಯವಸ್ಥೆಯಿರುವುದರಿಂದ ದುಡ್ಡು ಪೀಕುವ ಶಿಕ್ಷಣ ಸಂಸ್ಥೆಗಳು, ಶಾಲೆ, ಕಾಲೇಜುಗಳು ಇಲ್ಲವಾಗಿದೆ. ಪ್ರತಿಕ್ಷಣವೂ ಜಗತ್ತಿನ ಎಲ್ಲಾ ವಿಚಾರವನ್ನು ವಾಟ್ಸಪ್, ಫೇಸ್‌ಬುಕ್, ಆನ್‌ಲೈನ್‌ನ ಮೂಲಕ ವಿಡಿಯೋ ಕಾನ್ಫರೆನ್ಸ್ ಮಾಡಿ ಚರ್ಚಿಸಲಾಗುತ್ತದೆ. ರಸ್ತೆಗಳು ಅದೆಷ್ಟು ಚೆನ್ನಾಗಿದೆ ಎಂದರೆ ಇಡೀ ಭೂ ಮಂಡಲದಲ್ಲಿ ಮಣ್ಣಿನ ಅಂಶ ಸ್ವಲ್ಪವೂ ಕಾಣದಂತೆ ಎಲ್ಲವೂ ಸಿಮೆಂಟ್ ಮಾಡಲಾಗಿದೆ. ಓಡಾಡಲು ಐಷಾರಾಮಿ ಕಾರುಗಳು ತೀರಾ ಕಡಿಮೆ ಬೆಲೆಗೆ ಸಿಗುವುದರಿಂದ ನಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನಲ್ಲಿಯ ಮುಂದೆ ಕೈ ಇಟ್ಟರೆ ಸಾಕು ನೀರು ಬರುತ್ತದೆ, ರಿಮೋಟಿನಲ್ಲಿ ಬಟನ್ ಒತ್ತಿದರೆ ಗಾಳಿ ಬರುತ್ತದೆ, ನಳನಳಿಸುವ ಬೆಳಕಿನ ನಡುವೆ ಸೂರ್ಯನನ್ನು ನೋಡುವ ಅವಶ್ಯಕತೆಯೇ ಇಲ್ಲ. ಮರದ ಎಲೆಗಳು ಬೀಳುತ್ತದೆ ಎನ್ನುವ ಕಾರಣಕ್ಕೆ ಹಸಿರು ಮರದ ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗಿದೆ. ಪ್ರತಿಯೊಬ್ಬರಿಗೂ ಶುದ್ಧ ಗಾಳಿಗಾಗಿ ಆಕ್ಸಿಜನ್ ಸಿಲಿಂಡರ್‌ನ್ನು ಪೂರೈಸಲಾಗಿದೆ. ಯಾರೂ ಕಷ್ಟ ಪಡಬಾರದೆಂಬ ಕಾರಣಕ್ಕೆ ಎಲ್ಲರಿಗೂ ಅವರವರ ಅಕೌಂಟ್‌ಗಳಲ್ಲಿ ಯತೇಚ್ಛವಾಗಿ ದುಡ್ಡಿರುವಂತೆ ಮಾಡಲಾಗಿದೆ, ಅದನ್ನು ಕೇವಲ ಆನ್‌ಲೈನ್ ಮೂಲಕ ವ್ಯವಹಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅರ್ಥಕ್ರಾಂತಿಯ ಬೆನ್ನು ಹತ್ತಿ, ದುಡ್ಡು ಗಳಿಸುವ ಕಾರಣಕ್ಕೆ ಎಲ್ಲಾ ರೈತರ ಹೊಲದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ರೈತರು ಬೆಳೆ ಬೆಳೆಯುವ ಅವಶ್ಯಕತೆಯಿಲ್ಲ, ಅವರ ಅಕೌಂಟ್‌ಗಳಲ್ಲಿ ಬೇಕಾದಷ್ಟು ಹಣ ಬಂದು ಬೀಳುತ್ತಿದೆ.
ಸಿಹಿನೀರು ಜಗತ್ತಿನ ಎಲ್ಲೂ ಲಭ್ಯವಿಲ್ಲದ ಕಾರಣ ಸಮುದ್ರದ ನೀರನ್ನು ಸಿಹಿನೀರಾಗಿ ಸಂಸ್ಕರಿಸಿ ಜನರಿಗೆ ನೀಡುತ್ತಿರುವುದರಿಂದ ನೀರಿನ ಸಮಸ್ಯೆಯೇ ಇಲ್ಲವಾಗಿದೆ. ಚಳಿಗಾಲಕ್ಕೆ ಸಮಸ್ಯೆಯಾಗದಂತೆ ಎಲ್ಲೆಡೆ ಹೀಟರ್‌ಗಳನ್ನು, ಬೇಸಿಗೆಗೆ ಅನಕೂಲವಾಗಲು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಮಳೆಯೂ ಭೂಮಿಗೆ ತಲುಪದಂತೆ ವ್ಯವಸ್ಥೆ ಮಾಡಲಾಗಿದೆ.
ಎಲ್ಲವೂ ಮುಕ್ತ ವ್ಯವಸ್ಥೆಯಾದ್ದರಿಂದ ಸಂಬಂಧಗಳು ಬಟ್ಟೆ ಬದಲಾಯಿಸಿದಂತೆ ಬದಲಾಗಲು ಅವಕಾಶವಿದೆ. ಎಲ್ಲವೂ ಕೈಗೆ ಎಟುಕುವ ರೀತಿಯಲ್ಲಿರುವುದರಿಂದ ವಿಶ್ವಾಸ, ಮೋಹ, ಕರುಣೆ, ಅನುಕಂಪ, ಸಂತೋಷ, ದುಃಖ, ಪ್ರೇಮ, ಕಾಮ ಎಲ್ಲವೂ ಆನ್‌ಲೈನ್‌ನಲ್ಲಿಯೇ ಪ್ರಾರಂಭವಾಗಿ, ಆನ್‌ಲೈನ್‌ನಲ್ಲಿಯೇ ಅಂತ್ಯಗೊಳ್ಳುತ್ತಿದೆ.
ಎಲ್ಲವೂ ಇದ್ದು, ಏನೂ ಇಲ್ಲದ ಸ್ಥಿತಿಯಂತೆ ಭಾಸವಾಗುವ ಮನಸ್ಥಿತಿಗಳೇ ಹೆಚ್ಚಾಗಿ ಕಂಡಕಂಡಲ್ಲಿ ಜ್ಯೋತಿಷ್ಯಾಲಯ, ಮಠ, ಮಂದಿರ, ಚರ್ಚ್, ಮಸೀದಿ, ಗುರೂಜಿಗಳ ಆದ್ಯಾತ್ಮ ಮತ್ತು ಸಾಂತ್ವಾನದ ಕೆಲಸ ಜೋರಾಗಿ ನಡೆಯುತ್ತಿದೆ.
ಎಲ್ಲರೂ ಸಮಾನರು ಎಂಬ ಕಾರಣಕ್ಕೆ ಎಲ್ಲೂ ಯಾವ ಕೆಲಸಕ್ಕೂ ಬೇರೆ ಬೇರೆ ಜನ ಸಿಗುತ್ತಿಲ್ಲ. ಕೂಲಿ ಕಾರ್ಮಿಕರು, ಮನೆ ಕೆಲಸದವರು, ಎಲ್ಲರ ಹತ್ತಿರವೂ ಸಮನಾಗಿ ದುಡ್ಡಿದೆ, ಕಾರಿದೆ, ಅಂತಸ್ತಿದೆ. ಆತನಿಗೆ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವ ಮನಸ್ಸಿಲ್ಲ. ಹಾಗಾಗಿ ಎಲ್ಲರೂ ಅವರವರ ಕೆಲಸ ಅವರವರೇ ಮಾಡಿಕೊಳ್ಳುತ್ತಿದ್ದಾರೆ.
ಎಲ್ಲೆಡೆಯೂ ಪವಾಡಗಳು ನಡೆಯುತ್ತಿದೆ, ಕನಸು ಎಂಬಂತೆ ಘಟಿಸುತ್ತಿದೆ. ವ್ಯಕ್ತಿಯೊಬ್ಬ ನಿದ್ದೆಗಣ್ಣಿನಲ್ಲಿದ್ದವ  ದಿಡೀರ್ ಅಂತ ಮಂಚದಿಂದ ಕೆಳಗೆ ಬಿದ್ದಿದ್ದಾನೆ!!
ಏಯ್, ಏನಾಯ್ತು?
   ಪಕ್ಕದಲ್ಲಿದ್ದ ಗೆಳೆಯನ ಮಾತಿಗೆ- ವಾವ್ ಅದೆಂತ ಪ್ರಪಂಚ ಮಹರಾಯ ಅಂದ. ಯಾವ ಪ್ರಪಂಚ ಇದು? ನಾನೆಲ್ಲಿದ್ದೀನಿ? ಅಂದ. ಕಣ್ಣೊರೆಸಿಕೊಂಡು ನೋಡಿದ, ಮೇಲೆ ತೂತು ಬಿದ್ದ ಜೋಪಡಿ ಇತ್ತು, ಕೆಳಗಡೆ ಹರಿದ ಚಾಪೆಯಿತ್ತು, ಎದುರುಗಡೆ ಬಣ್ಣ ಮಾಸಿದ ಷರ್ಟು ಧರಿಸಿದ್ದ ಗೆಳೆಯನಿದ್ದ. ಹಸಿವಿಗಾಗಿ ಪರಿತಪಿಸುತ್ತಿದ್ದ ನಾಯಿ, ಕುರಿ, ದನ-ಕರುಗಳು ಹೊರಗೆ ನಿಂತಿದ್ದವು. ಬೇಗ ಎದ್ದು ಎಲ್ಲಾದರೂ ಕೂಲಿ ಕೆಲಸ ಹುಡುಕು ಹೋಗೋ ಎನ್ನುತ್ತಿದ್ದಳು ಅಲ್ಲೇ ನಿಂತಿದ್ದ ವೃದ್ಧ ತಾಯಿ!.
ಇದನ್ನು ಓದಿದರೆ, ಕತೆ ಅನಿಸಬಹುದು. ಆದರೆ, ಸತ್ಯ ಕೂಡ. ಮನುಷ್ಯ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿದ್ದಾನೆ. ಆದರೂ ಭ್ರಮೆಯಾಚೆಗಿನ ವಾಸ್ತವ ಪ್ರಪಂಚವನ್ನು ಇನ್ನೂ ಅರಿಯಲಾಗದೆ ಒದ್ದಾಡುತ್ತಿದ್ದಾನೆ. ಭ್ರಮೆಯೇ ಬದುಕು ಎಂದು ಸಂಭ್ರಮಿಸುತ್ತಿದ್ದಾನೆ. ಇದ್ದ ವ್ಯವಸ್ಥೆಯಲ್ಲಿಯೇ ಸಾಮಾನ್ಯ ಜ್ಞಾನ ಬಳಸಿ ಬೆಳೆಯುವ ಬದಲು ಕಲ್ಪನೆಯಲ್ಲಿಯೇ ತೇಲಾಡುತ್ತಿದ್ದಾನೆ, ವಾಸ್ತವತೆಯ ಹೆಜ್ಜೆಯಿಡುವ ಬದಲು ಮೂಢನಂಬಿಕೆಯಲ್ಲಿ ಮಾರುಹೋಗಿ ಇನ್ಯಾರೋ ಕಟ್ಟುವ ಟೊಳ್ಳು ಕತೆಗೆ ಹೊಗಳುಭಟನಾಗುತ್ತಿದ್ದಾನೆ!
ಈಗ ಹೇಳಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ರಾಜಕಾರಣದ ನೆಪದಲ್ಲಿ, ನಿತ್ಯದ ಬದುಕಿನಲ್ಲಿ ವಾಸ್ತವದ ಯೋಚನೆಯನ್ನೇ ಮಾಡದೇ, ಭ್ರಮೆಗಳೇ ಸರಿ, ಅದೇ ಅದ್ಭುತ ಎಂಬ ಆಲೋಚನೆಯಲ್ಲಿ ಸಂಭ್ರಮಿಸುವ ನಾವು-ನೀವುಗಳು ನಮಗೇ ಕೇಳಿಕೊಳ್ಳಬೇಕಾದ ಪ್ರಶ್ನೆ!  ನೀನು ಭ್ರಮೆಯೊಳಗೊ! ಭ್ರಮೆಯು ನಿನ್ನೊಳಗೋ!

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu