Wednesday, November 23, 2016

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ

ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
                           *ವೆಂಕಟೇಶ ಸಂಪ

ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು  ಪುಸ್ತಕ  ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!

ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ  ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ  ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ  ನೋಡುತ್ತಾ ಮುಂದೆ ಸಾಗಿದೆ!.....


ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ  ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?

ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ  ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್  ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!



ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ  ಹಾಸ್ಟೆಲ್ ಗೆ  ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್    ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!

ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....


ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....

ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!

ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!

ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು  ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!

ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!

ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....

ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......



ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........   

ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.


ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ  ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!

ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ  ಕಾಣುತ್ತಿರುವ  ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!


"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........

# ಓದಿ ಸಂಪದ ಸಾಲು

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu