Tuesday, January 21, 2025

ಸಂಪದ ಸಾಲು ಪತ್ರಿಕೆಗೆ ವರುಷ ಹದಿನೆಂಟು, ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು... ವೆಂಕಟೇಶ ಎಸ್ ಸಂಪ

ಸಂಪದ ಸಾಲು ಪತ್ರಿಕೆಗೆ  
                   ವರುಷ ಹದಿನೆಂಟು, 
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು...
                                   ವೆಂಕಟೇಶ ಎಸ್ ಸಂಪ 
ಬರೋಬ್ಬರಿ 18 ವರ್ಷಗಳ ಹಿಂದೆ! ಡಿಗ್ರಿ ಓದುತ್ತಿದ್ದ ಸಂದರ್ಭ! ಬೆಳಿಗ್ಗೆ ರಾಜ್ಯಮಟ್ಟದ ಪತ್ರಿಕೆಯನ್ನು ಮನೆಮನೆಗೆ ಹಂಚುವ ಕಾಯಕ! ಅದೇ ಪತ್ರಿಕೆಗೆ ವಾರಕ್ಕೆರಡು ಅಂಕಣ ಬರೆಯುವ ಹವ್ಯಾಸ! ಮಧ್ಯದಲ್ಲಿ ಕಾಲೇಜಿಗೆ ಹೋಗುವ ಅಭ್ಯಾಸ!
ಹೀಗಿದ್ದ ಬದುಕು.
ಮಲೆನಾಡಿನ ಹಳ್ಳಿ ಮೂಲೆಯಿಂದ ದೂರದ ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ತಾತಯ್ಯ ಅನಾಥಾಲಯ ಸೇರಿದವನು ನಾನು. ಉಚಿತವಾದ ಊಟ ವಸತಿ ವ್ಯವಸ್ಥೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಮೈಸೂರಿನ ಅನಾಥಾಲಯವನ್ನು ಸೇರಿ, ಸರ್ಕಾರದ ಮಹಾರಾಜ ಕಾಲೇಜಿಗೆ ಬಿಬಿಎಂ ವ್ಯಾಸಂಗಕ್ಕೆ ಸೇರಿದವನು, ಬಾಲ್ಯದಿಂದಲೇ  ಸಿಕ್ಕಾಪಟ್ಟೆ ಬಡತನ ,ಆ ಬಡತನ ಇದ್ದಾಗ ನಡೆದ ಅವಮಾನ, ಹಾಗೂ ನನ್ನ ಅವಸ್ಥೆಯ ಬಗ್ಗೆ ನನಗೇ ಇದ್ದ ಕೀಳರಿಮೆ ,
ಭವಿಷ್ಯ ಹೇಗಿರಲಿದೆಯೋ ಎಂಬ ಅಭದ್ರತಾಭಾವ! ಉಡಲಿಕ್ಕೆ ಸರಿಯಾದ ಡ್ರೆಸ್ ಇಲ್ಲ,
ಕೊಡಲಿಕ್ಕೆ ಸರಿಯಾದ ಅಡ್ರೆಸ್ಸಿಲ್ಲ.!
ಈ ಪರಿಸ್ಥಿತಿಯಿಂದ ಮೈಸೂರು ಸೇರಿದ ನಾನು ಇಟ್ಟುಕೊಂಡಿದ್ದು ಕೇವಲ ಕನಸುಗಳು.... ಕನಸುಗಳು.... ಮತ್ತದೇ....ಕನಸುಗಳು.... ಅಪ್ಪ ಅಮ್ಮನ ಆಶೀರ್ವಾದ, 
ಸಮಾಜ ಮಾಡಿದ ಕೊಂಕು ತುಂಬಿದ ಅವಮಾನ ಕಂಡಾಗಲೆಲ್ಲಾ ಕನಸು ಇಮ್ಮಡಿಗೊಳ್ಳುತ್ತಿತ್ತು.  ಆಗುತ್ತದೆಯೋ, ಬಿಡುತ್ತದೆಯೋ ಎಂಬ ಸಣ್ಣ ಕಲ್ಪನೆಯು ಇಲ್ಲದಂತೆ, ಕನಸು ಕಾಣುತ್ತಿದ್ದೆ.
ಆಗಸದ ಎತ್ತರದಲ್ಲಿ, ದೊಡ್ಡ ಶಬ್ದದಲ್ಲಿ ಸಾಗಿ ಹೋಗುತ್ತಿದ್ದ ವಿಮಾನವನ್ನು ನೋಡಿ, ನಾನು ಈ ವಿಮಾನವನ್ನು ಏರಬಲ್ಲೆನೆ? ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ. ಯಾರೋ ಒಳ್ಳೆಯ ಡ್ರೆಸ್ ಹಾಕಿಕೊಂಡು ಹೋಗುತ್ತಿದ್ದಾಗ ನಾನು ಹೀಗೆಲ್ಲ ಡ್ರೆಸ್ ಹಾಕಿಕೊಳ್ಳಬಹುದಾ!? ಎಂದೆಲ್ಲ ಯೋಚಿಸುತ್ತಿದ್ದೆ.
ಈಗಲೂ ನನಗೆ ನೆನಪಿದೆ! ಎಲ್ಲೋ,ಯಾರೋ ಕೊಡುವ ಹತ್ತು ಇಪ್ಪತ್ತು ರೂಪಾಯಿಗಳಿಗಾಗಿ ಅಡುಗೆ ಕೆಲಸಗಳನ್ನು ಮಾಡಿದ್ದು ನೆನಪಿದೆ. ಊಟ ಬಡಿಸಿದ್ದು ನೆನಪಿದೆ.ಯಾರದೋ ಮನೆಯಲ್ಲಿ ಸಗಣಿ ಬಾಚಿದ್ದು ನೆನಪಿದೆ.ಯಾವುದೋ ದೇವಸ್ಥಾನದಲ್ಲಿ,ಪರಿಚಯವೇ ಇಲ್ಲದ ಅರ್ಚಕರಿಗೆ ಕೈ ಆಳಾಗಿ ಕರ್ತವ್ಯ ಮಾಡಿದ್ದು ನೆನಪಿದೆ.ನೆಲ್ಲಿಕಾಯಿ ವ್ಯಾಪಾರ, ಅಡಿಕೆ ವ್ಯಾಪಾರ,ಜೇನುತುಪ್ಪ ವ್ಯಾಪಾರ, ಹೀಗೆ ಎಲ್ಲೆಲ್ಲಿ ಲಾಭವನ್ನು ಮಾಡಬಹುದು, ಎಲ್ಲೆಲ್ಲಿ ಕಲಿಕೆಯನ್ನು ಕಲಿಯಬಹುದು,ಗಳಿಕೆಯನ್ನು ಗಳಿಸಬಹುದು, ಎಂಬ ದಾರಿಯನ್ನು ಹುಡುಕುವ ನಿರಂತರ ಪ್ರಯತ್ನ ಮಾಡುತ್ತಿದ್ದೆ.
ಕೆಲವೊಮ್ಮೆ ರಾತ್ರಿ 12 ಗಂಟೆಯವರೆಗೆ, ಹತ್ತಿಪ್ಪತ್ತು ರೂಪಾಯಿಗಾಗಿ ಎಲ್ಲೋ ಅಡುಗೆಯನ್ನು ಬಡಿಸಿ,ತರಕಾರಿ ಹೆಚ್ಚಿ,ಅಲ್ಲೆಲ್ಲೋ ಕಲ್ಯಾಣ ಮಂಟಪದ ಮೂಲೆಯಲ್ಲಿ ಮಲಗಿದ್ದಾಗ, ಕಿಟಕಿಯ ಸಂಧಿಯಿಂದ ಕಾಣುತ್ತಿದ್ದ, ಆಗಸದ ನಕ್ಷತ್ರಗಳನ್ನು ನೋಡಿ, "ಈ ಬಡತನಕ್ಕೆ ಔಷಧಿ ಇಲ್ಲವಾ"?ಎಂದು ಗೊಣಗುತ್ತಾ, ನಾನು ಒಬ್ಬ ಸಾಧಕ ಆಗಬಹುದೇ? ನನ್ನ ಕನಸುಗಳೆಲ್ಲವೂ ಈಡೇರುತ್ತೇವೆಯೇ?ಎಂದೆಲ್ಲ ನನಗೆ ನಾನೇ ಕೇಳಿಕೊಳ್ಳುತ್ತಾ, ಆಗಸದ ನಕ್ಷತ್ರವನ್ನು ನೋಡುತ್ತಾ, ರಾತ್ರಿ ಇಡಿ ಕಳೆದದ್ದು ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಹಾಗೆ ಆಕಾಶವನ್ನು ನೋಡುತ್ತಿದ್ದಾಗ, ಯಾರೋ ಮಾಡಿದ ಅವಮಾನಗಳು ನೆನಪಾಗಿ, ಕಣ್ಣಂಚಿನಲ್ಲಿ ನೀರು ಬಿದ್ದು, ಕತ್ತಲೆಯಲ್ಲಿ ಅದು ಕರಗಿ ಹೋಗುತ್ತಿತ್ತು.
ಇದೆಲ್ಲವೂ ಕೂಡ ಈಗ ಇತಿಹಾಸ!

ಕಾಲೇಜಿನ ನೋಟಿಸ್ ಬೋರ್ಡಿಗೆ ಸೀಮಿತವಾಗಿ ಪ್ರಾರಂಭವಾದ ಸಂಪದ ಸಾಲು ಪತ್ರಿಕೆ, ಕ್ರಮೇಣವಾಗಿ ಜೆರಾಕ್ಸ್ ಪ್ರತಿಯತ್ತ ವಾಲಿತು.
ಅಲ್ಲಿಂದ ಕೇಂದ್ರ ಸರ್ಕಾರದ ಆರ್ ಎನ್ ಐ ಯಲ್ಲಿ ನೋಂದಣಿಯಾಗಿ ಅಧಿಕೃತವಾಗಿ ಪ್ರಾರಂಭವಾಗಿ, ಕೇವಲ ಎರಡು ಪುಟಗಳಲ್ಲಿ ತನ್ನ ಪುಟ್ಟ ಹೆಜ್ಜೆಯನ್ನು ಇಟ್ಟಿತ್ತು. ಒಳ್ಳೆಯದನ್ನು ಓದುಗರಿಗೆ ಕೊಡಬೇಕು ಎನ್ನುವ ಆಲೋಚನೆ ಬಿಟ್ಟು, ಪತ್ರಿಕೆ ಬಗ್ಗೆ ಯಾವ ಯೋಚನೆ ಇರಲಿಲ್ಲ.ಜಾಹೀರಾತುದಾರರು ಇಲ್ಲ, ಓದುವರು ಇಲ್ಲ, ಸರಿಯಾದ ಬರಹಗಾರರು ಜೊತೆಗಿಲ್ಲ, ಪ್ರಿಂಟ್ ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?ಯಾರ ಹತ್ತಿರ ಮಾಹಿತಿ ಪಡಿಬೇಕು? ದುಡ್ಡು ಹೇಗೆ ಹೊಂದಿಸಬೇಕು? ಯಾವುದೂ ಸರಿಯಾಗಿ ಗೊತ್ತಿರಲಿಲ್ಲ.
 ನಾನು ಒಬ್ಬ ಪತ್ರಕರ್ತನಾಗಬೇಕು, ನನ್ನದು ಒಂದು ಪತ್ರಿಕೆ ಇರಬೇಕು, ಎಂಬ ಆಲೋಚನೆ ಮಾತ್ರ ಗಟ್ಟಿಯಾಗಿ ತಲೆಯಲ್ಲಿತ್ತು. 
ಹೀಗೆ ಕನಸುಗಳು ನಿಚ್ಚಳವಾಗಿದ್ದಾಗ "ಆ ಕನಸೇ ದಾರಿಯನ್ನು ಹುಡುಕಿಕೊಳ್ಳುತ್ತದೆ" ಎಂದು ವಿದ್ವಾಂಸರು ಹೇಳುತ್ತಾರೆ.
ಅದು ಸತ್ಯ ಕೂಡ.
" ಪೇಪರ್ ಹಂಚುವವನೇ, ಪೇಪರ್ ಮಾಡುವುದು ಎಂದರೆ" ಸಣ್ಣ ವಿಷಯವೇನಲ್ಲ.
  ಸಾಹಿತ್ಯ, ಸೃಜನಾತ್ಮಕ ಬರವಣಿಗೆಗಳಿಂದ ಪುಟ್ಟ ಪುಟ್ಟ ಹೆಜ್ಜೆಯನ್ನು ಇಟ್ಟು ಹೊರಟ ಸಂಪದ ಸಾಲು ಪತ್ರಿಕೆ, "ಬಿಂದುವಿನಿಂದ ಸಿಂಧುವಾದಂತೆ" ಇಂದು ಲಕ್ಷ ಲಕ್ಷ ಓದುಗರನ್ನು ಹೊಂದಿದೆ.
ಎರಡು ಪುಟದಿಂದ 4, 6, 8 ,16, 24 ,28 , 32 ಹೀಗೆ ಪುಟಗಳ ಸಂಖ್ಯೆ ಏರುತ್ತಲೇ ಇದೆ.
ಕಪ್ಪು ಬಿಳುಪು ಸುಂದರಿಯಾಗಿ ಪ್ರಾರಂಭಗೊಂಡ  ಸಂಪದ ಸಾಲು ಇಂದು ಕಲರಪುಲ್ ಆಗಿ ಕಂಗೊಳಿಸುತ್ತಿದೆ. 
 ಕರೋನಾದಂತಹ  ಸಂದರ್ಭದಲ್ಲಿಯೂ, ಒಮ್ಮೆಯೂ ಪತ್ರಿಕೆ ನಿಲ್ಲಲಿಲ್ಲ.
 ಪ್ರತಿ ತಿಂಗಳು ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಕನ್ನಡಿಗರನ್ನು ಅಂಚೆಯ ಮೂಲಕ, ಈ ಮೇಲ್ ಮೂಲಕ, ವಾಟ್ಸಪ್ ಮೂಲಕ, ಅಂತರ್ಜಾಲದ ಮೂಲಕ, ಲಕ್ಷ ಲಕ್ಷ ಮಂದಿಯನ್ನು ತಲುಪುತ್ತಿದೆ. ನೂರಾರು ಪುಟಗಳ ಜಾಹೀರಾತುಗಳು ಪತ್ರಿಕೆಗೆ ಬರುತ್ತಿದೆ. "ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು? ಎಷ್ಟೊಂದು ಮನೆ, ಇಲ್ಲಿ ಎಲ್ಲಿ ನಮ್ಮನೆ?" ಎಂದು ಅಸಹಾಯಕನಾಗಿ ಆಕಾಶ ನೋಡುತ್ತಿದ್ದ ನನಗೆ, ಸಂಪದ ಸಾಲು ಪತ್ರಿಕೆಯ ಸ್ವಂತ ಕಟ್ಟಡ ಮತ್ತು ಆಸ್ತಿಯನ್ನು ಹೊಂದಿದ ಹೆಮ್ಮೆ ಇದೆ.
 ಅಂದು ಕೊಡಲಿಕ್ಕೆ ಅಡ್ರೆಸ್ ಇರಲಿಲ್ಲ, ಇಂದು ಕೇವಲ ಹೆಸರು ಹಾಕಿದರೆ, ಪತ್ರಗಳು ಮನೆ ಬಾಗಿಲು ತಲುಪುತ್ತದೆ. ಯಾವುದೋ ಪತ್ರಿಕೆಯ ಮೂಲೆಯಲ್ಲಿ, ಯಾರದ್ದೋ ಚಿಕ್ಕ ಹೆಸರು ಬಂದಾಗ, ಅವರನ್ನು  ಹೋಗಿ,ಭೇಟಿ ಮಾಡಿ ಕೈ ಕುಲುಕುತ್ತಿದ್ದೆ.
 ಆದರೆ ಇಂದು ದಿನಕ್ಕೊಂದು ಜಿಲ್ಲೆಯಲ್ಲಿ, ಬೇರೆ ಬೇರೆ ಸಂಘಟನೆಗಳು ಕರೆದು ಗೌರವಿಸಿ,ಸನ್ಮಾನಿಸಿ, ದೊಡ್ಡ ದೊಡ್ಡ ಲೇಖನಗಳನ್ನು ನನ್ನ ಬಗ್ಗೆ ಮಾಡುತ್ತಿದೆ.
 ಬಹುತೇಕ ಟಿವಿ ವಾಹಿನಿಗಳಲ್ಲಿ,ಪತ್ರಿಕೆಗಳಲ್ಲಿ,ರೆಡಿಯೋಗಳಲ್ಲಿ ಸಂದರ್ಶನಗಳು ಪ್ರಸಾರವಾಗಿವೆ.
 ನನ್ನ ಬರವಣಿಗೆಗೆ ಎಲ್ಲಾದರೂ ಒಂದು ಅವಕಾಶ ಸಿಗುತ್ತದೆಯೇ ಎಂದು ಕಾಯುತ್ತಿದ್ದ ನಾನು ಇಂದು ಸಾವಿರಕ್ಕೂ ಹೆಚ್ಚು ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದ್ದೇನೆ. ಅದೆಷ್ಟೋ ವಿದ್ಯಾರ್ಥಿಗಳ ಶಾಲಾ ಕಾಲೇಜುಗಳ ಶುಲ್ಕವನ್ನು ಕಟ್ಟಿದ್ದೇವೆ, ಅದೆಷ್ಟೋ ಆರ್ಥಿಕ ಸಮಸ್ಯೆ ಇರುವ ರೋಗಿಗಳಿಗೆ ಬೆಂಬಲಿಸಿದ್ದೇವೆ. ನಮ್ಮ ಸಂಸ್ಥೆಯಿಂದ ಹಲವಾರು ಬಾರಿ ರಕ್ತದಾನವನ್ನ ಮಾಡಿದ್ದೇವೆ. ನೂರಾರು ಜನ ಜಾಗೃತಿ ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಿಂದ ನಿರಂತರವಾಗಿ ನಡೆಸುತ್ತಿದ್ದೇವೆ.
ಇವೆಲ್ಲವನ್ನ ಹೇಳುತ್ತಿರುವುದು ನನ್ನ "ಅಹಂ" ಭಾವದಿಂದ ಅಲ್ಲ.
ನನಗೆ ನನ್ನ ಬಗ್ಗೆ ಹೆಮ್ಮೆ ಇದೆ. ನಮ್ಮ ಕೆಲಸವನ್ನು ನಾವೇ ಹೇಳದಿದ್ದರೆ ಜಗತ್ತಿಗೆ ಗೊತ್ತಾಗುವುದು ಹೇಗೆ?!
"ಪಾಸಿಟಿವ್ ಜರ್ನಲಿಸಂ" ಗೆ ಹೊಸ ವ್ಯಾಖ್ಯಾನ ಕೊಟ್ಟಿದ್ದೇವೆ. ಒಳ್ಳೆಯದನ್ನು ಬರೆದು, "ಇಸಂ"ಗೆ ಒಳಗಾಗದೇ ಪತ್ರಿಕೆಯನ್ನು ನೆಡೆಸಬಹುದೆಂಬುದಕ್ಕೆ ಉದಾಹರಣೆಯಾಗಿದ್ದೇವೆ.
ಸಂಪದ ಸಾಲು ಎಂಬ 
ಡಿಜಿಟಲ್ ಚಾನಲ್ ಪ್ರಾರಂಭವಾಗಿದೆ.
ಹೊಸ ಹೊಸ ಯೋಜನೆಗಳು ಸದ್ಯದಲ್ಲೇ ಪ್ರಾರಂಭವಾಗುತ್ತಿದೆ. ಹಾಗಂತ ಕ್ರಮಿಸಬೇಕಾದ ದಾರಿ ತುಂಬಾ ದೊಡ್ಡದಿದೆ. ಸಾಗಿ ಬಂದ ಪುಟ್ಟ ಹೆಜ್ಜೆಗಳು ಆಗಾಗ ನೆನಪಾಗುತ್ತದೆ, ಮುಂದೆ ನೋಡಿದಾಗ ಸಾಗಬೇಕಾದ ಸಮುದ್ರ ದೊಡ್ಡದಾಗಿ ಕಾಣುತ್ತದೆ.ಕೋಟಿ ಕನಸುಗಳು ಹೊತ್ತು, ಕರ್ನಾಟಕದ ಎಲ್ಲಾ ಕನ್ನಡಿಗರ ಮನೆಗೆ,ಮನಕ್ಕೆ ನಮ್ಮ ಸಂಪದ ಸಾಲು ಪತ್ರಿಕೆ  ತಲುಪಬೇಕೆಂಬ ಸಂಕಲ್ಪವನ್ನು ಮಾಡುತ್ತಿದ್ದೇನೆ,ದಯಮಾಡಿ ಜೊತೆಯಾಗುವೀರಾ!?
ಒಂದೊಳ್ಳೆ ಕೆಲಸಕ್ಕೆ ನೆರವು ನೀಡುವಿರಾ!?
ಪಾಸಿಟಿವ್ ಜರ್ನಲಿಸಂ ಬೆಳೆಸುವಿರಾ!?
ಸುಂದರವಾದ ಟೀಂ ಕಟ್ಟೋಣ ಬನ್ನಿ,
ಸಂಪದ ಸಾಲು ಪತ್ರಿಕೆಗೆ ಈಗ ಹದಿನೆಂಟು....
ಇರಲಿ ನಿಮ್ಮೆಲ್ಲರ ಪ್ರೀತಿಯ ನಂಟು....
ಧನ್ಯವಾದಗಳು, ಕರೆಮಾಡಿ ಜೊತೆಯಾಗಿ,
9448219347
sampadasaalu@gmail.com 


ನಮ್ಮ ವಾಟ್ಸಪ್ ಬಳಗ ಸೇರಲು ಇಲ್ಲಿ ಕ್ಲಿಕ್ ಮಾಡಿ:

ನೀವು ಬರಹಗಾರರಾದರೆ ಮಾತ್ರಾ ಇಲ್ಲಿ ಸೇರಿ:


ನಮ್ಮ YouTube ಬಳಗ ಸೇರಲು ಇಲ್ಲಿ subscribe ಕ್ಲಿಕ್ ಮಾಡಿ:

Wednesday, January 8, 2025

ಸದ್ದು ಮಾಡದ ಸಾಧಕರು, ಇವರು ನಮ್ಮ ಹೆಮ್ಮೆ... ಸಂಪದ ಸಾಲು ಪತ್ರಿಕೆಯ ವತಿಯಿಂದ ಸಾಧಕರ ಪರಿಚಯ ಮಾಲಿಕೆ ಇಂದಿನ ಸಾಧಕರು, ಶ್ರೀ ಚಂದ್ರಶೇಖರ್ ಕಾಕಾಲ್

*ಸದ್ದು ಮಾಡದ ಸಾಧಕರು* ,
            ಇವರು ನಮ್ಮ ಹೆಮ್ಮೆ... ಸಂಪದ ಸಾಲು ಪತ್ರಿಕೆಯ ವತಿಯಿಂದ  *ಸಾಧಕರ ಪರಿಚಯ ಮಾಲಿಕೆ,* 
ಇಂದಿನ ಸಾಧಕರು,
 *ಶ್ರೀ ಚಂದ್ರಶೇಖರ್ ಕಾಕಾಲ್* 


ಮಲೆನಾಡಿನ ಹಳ್ಳಿಮೂಲೆಯಲ್ಲಿ ಹುಟ್ಟಿದ ಇವರು  IT ಕ್ಷೇತ್ರದಲ್ಲಿ ಜಗತ್ತಿನ ದೈತ್ಯ ಕಂಪನಿಗಳಾದ ಇನ್ಫೋಸಿಸ್, ಎಲ್ ಅಂಡ್ ಟಿ ಇನ್ಫೋಟೆಕ್ ನಂತಹ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಯಲ್ಲಿದ್ದ ಹಿರಿಯ ಸ್ನೇಹಿತರಾದ ಚಂದ್ರಶೇಖರ್ ಕಾಕಾಲ್. ಇವರಿಗೆ ಜಗತ್ತಿನ 25 ಮಂದಿ ಶ್ರೇಷ್ಠ ಕನ್ಸಲ್ಟೆಂಟ್ ಗಳಲ್ಲಿ ಒಬ್ಬರು ಎಂದು *ಅಮೆರಿಕಾದ ಕನ್ಸಲ್ಟಿಂಗ್ ಮ್ಯಾಗಝೀನ್ ಪ್ರಶಸ್ತಿ* ನೀಡಿತ್ತು. ಹೆಗ್ಗೋಡಿನ ಸುತ್ತಲಿನ ಮೂರು ಪಂಚಾಯತಿ ಗಳು ಸೇರಿ ' ನಾಗರಿಕ ಸಮ್ಮಾನ ' ವನ್ನೂ ಏರ್ಪಡಿಸಿದ ಹಿರಿಮೆ ಇವರಿಗೆ ಸಂದಿದೆ.
ಊರಿನ ಜನರಿಗಾಗಿ ತಾವು ಓದಿದ ಶಾಲೆಯಲ್ಲಿ  ಕಾಲೇಜ್ ಶಿಕ್ಷಣ ವ್ಯವಸ್ಥೆ ಮಾಡಿದ್ದಾರೆ.  ನೂರಾರು ಮಕ್ಕಳಿಗೆ ಸ್ಕಾಲರ್ ಶಿಪ್  ನೀಡಿದ್ದಾರೆ. ಊರಿನ ಮಕ್ಕಳಿಗೆ  ಉದ್ಯೋಗವಾಗಲಿ ಮತ್ತು ಹಳ್ಳಿಯ ಜನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹಳ್ಳಿಯಲ್ಲಿಯೇ ಸೂಪರ್ ಮಾರ್ಕೆಟ್ ಮಾಡಿದ್ದಾರೆ.
ಹಳ್ಳಿಯಲ್ಲಿಯೇ ಪೆಟ್ರೋಲ್ ಸಿಗಲಿ ಎಂಬ ಉದ್ದೇಶಕ್ಕೆ ಹೆಗ್ಗೋಡು ಎಂಬ ಹಳ್ಳಿಯಲ್ಲಿ ಪೆಟ್ರೋಲ್ ಬಂಕ್ ಶುರು ಮಾಡಿದವರು ಇವರು.
ಸಾಗರದಂತಹ ಪ್ರದೇಶದಲ್ಲಿ ಒಬ್ಬರಾದರೂ ಹೆಸರಾಂತ ವಿಜ್ಞಾನಿ ಆಗಲಿ ಎಂಬ ಆಶಯದಲ್ಲಿ ವಿಜ್ಞಾನ ಕೇಂದ್ರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಆಟಿಸಂ ಮಕ್ಕಳ ಶಾಲೆಗೆ ಸಹಾಯ ಮಾಡಿದ್ದಾರೆ. ಊರಿನ ಕೆರೆ ಹೂಳೆತ್ತಿಸಿದ್ದಾರೆ, ದ್ಯಾವಾಸ ಎಂಬ ನದಿಗೆ ಪುನರುಜ್ಜೀವನ ಕೊಡಲು, ನೀರು ಇಂಗಿಸಲು  ಜನ ಜಾಗೃತಿ ಮೂಡಿಸಿದ್ದಾರೆ .  ಬೆಂಗಳೂರಿನ ತಮ್ಮ ಬಡಾವಣೆಯಲ್ಲಿ 4 ಕಡೆ ಮಿಯಾವಾಕಿ ಕಿರು ಅರಣ್ಯವನ್ನು ರೂಪಿಸಿ 5000 ಕ್ಕೂ ಹೆಚ್ಚು ಗಿಡ ನೆಡಿಸಿದ್ದಾರೆ.

ಇವರಿಗೆ *ಸಂಪದ ಸಾಲು ಪತ್ರಿಕೆಯ* ವತಿಯಿಂದ ಶುಭಾಶಯಗಳು,
                 ವೆಂಕಟೇಶ ಎಸ್ ಸಂಪ 
                   ಸಂಪದ ಸಾಲು ಪತ್ರಿಕೆ 
                       9448219347

Sunday, September 29, 2024

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿ ಪ್ರದಾನ.

ಪತ್ರಕರ್ತ ವೆಂಕಟೇಶ ಸಂಪ ಅವರಿಗೆ ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿ ಪ್ರದಾನ.
ಬೆಳಕು ಸಾಹಿತ್ಯಿಕ,ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ),ನೀಡುವ 
ರಾಷ್ಟ್ರಮಟ್ಟದ "ಕಾಯಕ ಸಾಮ್ರಾಟ್" ಪ್ರಶಸ್ತಿಯನ್ನು ಪತ್ರಕರ್ತ, ಸಂಪದ ಸಾಲು ಪತ್ರಿಕೆ ಸಂಪಾದಕ, ವೆಂಕಟೇಶ ಎಸ್  ಸಂಪ ಅವರಿಗೆ ಸೆಪ್ಟೆಂಬರ್ 29 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರದಾನ ಮಾಡಲಾಯಿತು. 
ವೆಂಕಟೇಶ ಸಂಪ ಅವರು ಕಳೆದ 17 ವರ್ಷಗಳಿಂದ ಸಂಪದ ಸಾಲು ಪತ್ರಿಕೆ ನಡೆಸುತ್ತಿದ್ದು,ಇವರ ಸಾವಿರಾರು ಕತೆ,ಕವನ,ಲೇಖನಗಳು ರಾಜ್ಯದ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಹಾಗು ಟಿ ವಿ,ರೇಡಿಯೋಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು,ಹಲವಾರು ಸಿನಿಮಾ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ರಕ್ತದಾನ,ನೇತ್ರದಾನ,ಪರಿಸರ ಜಾಗೃತಿ ಅಭಿಯಾನ,ನೀರು ಉಳಿಸಿ ಅಭಿಯಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ವೆಂಕಟೇಶ ಸಂಪ ಅವರು, ಸಾವಯವ ಕೃಷಿಯಲ್ಲೂ ಸಾಧನೆ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ ಮಹೇಶ್ವರ ಸ್ವಾಮಿಗಳು,ಶ್ರೀ ಮ.ನೀ.ಪ್ರ ಕಲ್ಯಾಣ ಸ್ವಾಮಿಗಳು,ಹೊಸಪೇಟೆ ಕ್ಷೇತ್ರದ ಶಾಸಕರಾದ ಎಚ್ ಆರ್ ಗವಿಯಪ್ಪ,ಬರಹಗಾರರಾದ ಕುಮಾರಸ್ವಾಮಿ ಹಿರೇಮಠ್,ಬೆಳಕು ಸಂಸ್ಥೆಯ ಮುಖ್ಯಸ್ಥರಾದ ಅಣ್ಣಪ್ಪ ಮೇಟಿ ಗೌಡ ಮುಂತಾದವರು ಉಪಸ್ಥಿತರಿದ್ದರು.

Friday, June 16, 2023

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.ಸಂಪೂರ್ಣ ವಿವರ ಇಲ್ಲಿದೆ

ಸಂಪದ ಸಾಲು ಪತ್ರಿಕೆಯ ವೆಂಕಟೇಶ ಸಂಪ ಅವರ ಯಶಸ್ಸಿನ ದಾರಿ.
ಸಂಪೂರ್ಣ ವಿವರ ಇಲ್ಲಿದೆ.

ವೆಂಕಟೇಶ ಎಸ್ ಸಂಪ ಅವರ ಜೀವನಗಾಥೆ... ದೂರದರ್ಶನದಲ್ಲಿ 

https://youtu.be/hbbjRKokBjs

ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ MBA ಯುವಕನ ವೈವಿಧ್ಯ ಕೃಷಿ

https://youtu.be/eAtG9kZeQXw

ಮಳೆ ನೀರು ಸಂಗ್ರಹ ವಿಚಾರದಲ್ಲಿ ಸಮಯ ಟಿ ವಿ ಸಂದರ್ಶನ

https://youtu.be/yOZb8rzADuc

ಯುವ ಸಾಧಕ ಕಾರ್ಯಕ್ರಮದಲ್ಲಿ ಸಂದರ್ಶನ

https://youtu.be/h3VsBYPBGIQ

FM ರೈನ್ಬೋ ಕನ್ನಡ ಕಾಮನಬಿಲ್ಲು 101.03 ರಲ್ಲಿ ಸುದೀರ್ಘ ನೇರ ಸಂದರ್ಶನ

https://youtu.be/8aU3chRqvmo

ಖಾಸಗಿ ವಾಹಿನಿಯಲ್ಲಿ ಪಾಸಿಟಿವ್ ಪಾಲಿಟಿಕ್ಸ್ ಕಾರ್ಯಕ್ರಮದಲ್ಲಿ

https://youtu.be/fkZ2Ez7FFB8

ದೂರದರ್ಶನ ಚಂದನ ವಾಹಿನಿಯಲ್ಲಿ ನೇರ ಪ್ರಸಾರದ ಸಂದರ್ಶನದ ಸಂದರ್ಭ

https://youtu.be/hbbjRKokBjs

ಕೃಷಿರಂಗ ಧಾರವಾಡ ಆಕಾಶವಾಣಿಯ ಸಂದರ್ಶನ

https://youtu.be/Oe5lYZjB8r4

ಆಕಾಶವಾಣಿ ವಿಶೇಷ ಕಾರ್ಯಕ್ರಮ
https://youtu.be/_809tUYOwLM

ಪತ್ರಿಕೆಗೂ ಸೈ...ಕೃಷಿಗೂ ಜೈ... ವಿಶೇಷ ಲೇಖನ 

https://enantheeri.com/2022/11/17/venkatesh_sampa/

Sunday, April 9, 2023

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನಯವರ ಭೇಟಿ.ವೆಂಕಟೇಶ ಸಂಪ. ಸಂಪಾದಕ,ಸಂಪದ ಸಾಲು ಪತ್ರಿಕೆ

ಪರಮ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳು,ಶ್ರೀ ಸ್ವರ್ಣವಲ್ಲಿ ಸಂಸ್ಥಾನ
ಇವರನ್ನು ಭೇಟಿ ಮಾಡಿ  ಆಶೀರ್ವಾದ ಪಡೆದೆ.
16 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ, ಸಂಪದ ಸಾಲು ಪತ್ರಿಕೆ ಬಗ್ಗೆ ಹೆಮ್ಮೆ ಪಟ್ಟ ಶ್ರೀಗಳು,"ಇಂತಹ ಪತ್ರಿಕೆಯನ್ನು ಸಮಾಜ ಬೆಳೆಸಬೇಕು ಮತ್ತು ಇಂತಹ ಧನಾತ್ಮಕ ಪತ್ರಿಕೆ ಅತ್ಯಂತ ಎತ್ತರಕ್ಕೆ ಬೆಳೆಯಲಿ" ಅಂತ ಆಶೀರ್ವದಿಸಿದರು,
Venkatesha Sampa 
ಓದಿ ಸಂಪದ ಸಾಲು ಪತ್ರಿಕೆ  9448219347

#positivejournalism #ಸಂಪದಸಾಲು 
#ಓದಿಸಂಪದಸಾಲುಪತ್ರಿಕೆ #ವೆಂಕಟೇಶಸಂಪ #swarnavali #ಸ್ವಾಮೀಜಿ #ಸಿರಸಿ #ಉತ್ತರಕನ್ನಡ

Saturday, February 11, 2023

ಹಳ್ಳಿಯಲ್ಲೂ ದಿಲ್ಲಿಯ ಕಚೇರಿ ತೆರೆಯಬಹುದು:ಗೌತಮ್ ಬೆಂಗಳೇ

ಶಿರಸಿಯ ಸಮೀಪದ ಬೆಂಗಳೆ ಎಂಬ ಊರಿನಿಂದ ದೂರದ ದೆಹಲಿಯ ಹತ್ತಿರ ನೋಯ್ಡಾಕ್ಕೆ ಹೋದ ವ್ಯಕ್ತಿ, ಇನ್ನೊಬ್ಬ ಸ್ನೇಹಿತನೊಂದಿಗೆ ಸೇರಿ ಸಹ ಸಂಸ್ಥಾಪಕನಾಗಿ  ಒಂದು ಕಂಪನಿಗಳಲ್ಲಿ ಕೆಲಸ ಮಾಡಿದ, ಒಂದು ಹಂತದ ನಂತರ ತಾನು ಹುಟ್ಟಿ ಬೆಳೆದ ಊರಿನಲ್ಲಿಯೇ ಜಮೀನನ್ನು ಖರೀದಿಸಿ ಅಲ್ಲಿಯೇ ಒಂದಷ್ಟು ಜನಕ್ಕೆ ಕೆಲಸ ಕೊಡಬೇಕೆಂದು ಪ್ರಾರಂಭಿಸಿದ ಕಂಪನಿಯ ಹೆಸರೇ ಆಲ್ಟ್ ಡಿಜಿಟಲ್ ಟೆಕ್ನಾಲಜಿಸ್,ನಮ್ಮ ಸಂಪದ ಸಾಲು ಪತ್ರಿಕೆ ಯ ಬರಹಗಾರನಾಗಿ ಗುರುತಿಸಿಕೊಂಡಿದ್ದ,ಸರಳ ವ್ಯಕ್ತಿತ್ವದ ಹುಡುಗ ತನ್ನ ವಿದ್ಯಾಭ್ಯಾಸದ ಸಮಯದಲ್ಲಿ ಹಿಂದಿದ್ದರೂ ಬದುಕಿನ ಸಾಧನೆಯ ಹಾದಿಯಲ್ಲಿ ಮುಂದೆ ಸಾಗುವ ಪ್ರಯತ್ನ ಮಾಡಿದ. ಅದರ ಪ್ರತಿಫಲವೇ ಹಳ್ಳಿಯಲ್ಲೂ ಕೂಡ ಕಂಪನಿಯನ್ನು ಪ್ರಾರಂಭಿಸಬಹುದು ಎಂಬ ಹೊಸ ಆಲೋಚನೆಯನ್ನು ಮಾಡಿದ್ದಾನೆ.
ಕಂಪನಿಗಳು ಎಂದರೆ ದೊಡ್ಡ ದೊಡ್ಡ ಸಿಟಿಯಲ್ಲಿರಬೇಕು, ವಿಮಾನ ನಿಲ್ದಾಣ ಹತ್ತಿರವಿರಬೇಕು, ಎಲ್ಲಾ ಮೂಲಭೂತ ಸೌಕರ್ಯಗಳು ಇರಬೇಕು ಎಂದು ಬಯಸುವ ಈ ಕಾಲದಲ್ಲಿ ತಾನು ಹುಟ್ಟಿ ಬೆಳೆದ ಊರಿನ ನಡುವೆ, ಕಾಡಿನ ನಡುವೆ ಪುಟ್ಟದೊಂದು ಕಚೇರಿ ಕಟ್ಟಿ ಅಲ್ಲೇ ಒಂದು 10 -20 ಜನರಿಗೆ ಕೆಲಸ,ಕೈತುಂಬಾ ಸಂಬಳ ಕೊಡುವ ಮನಸ್ಸು ಕೂಡ ಅಭಿನಂದನಾರ್ಹ.
ಈ ಗೆಳೆಯನ ಹೆಸರು ಗೌತಮ ಬೆಂಗಳೆ,
ನಿನ್ನೆ ತಾನೇ ಈತನ ಕಂಪನಿ, ಬನವಾಸಿ ಸಮೀಪದ ವಡ್ಡಿನಕೊಪ್ಪದಲ್ಲಿ ನಡೆಯಿತು,
ಸಂಬಳ ಸಿಕ್ಕರೆ ಸಾಕು, ಎಂಬ ಮನಸ್ಥಿತಿಯಿಂದ ಸ್ವಂತ ಉದ್ಯಮ ಮಾಡಬೇಕೆಂಬ ಮನಸ್ಥಿತಿ ಹೆಚ್ಚಾಗಲಿ ಎಂಬ ಆಶಯದೊಂದಿಗೆ ಶುಭ ಹಾರೈಸಿ ಬಂದೆ. ಗೆಳೆಯಾ, all the best Goutam Hegde 
ಸಂಪದ ಸಾಲು ಪತ್ರಿಕೆ 
9448219347
ಚಿತ್ರದಲ್ಲಿ ಗೆಳೆಯ ಗೌತಮ್ ಬೆಂಗಳೆ ಮತ್ತು ಆಲ್ಟ್ ಡಿಜಿಟಲ್ ಕಂಪನಿಯ ಸಂಸ್ಥಾಪಕ ವಿಕಾಸ್ ಗೋಯಲ್ ಜೊತೆ ಪತ್ರಕರ್ತ ವೆಂಕಟೇಶ ಸಂಪ

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu