Monday, February 15, 2021

ಏರಿಸಿದಾಗ ಏರದೇ, ಇಳಿಸಿದಾಗ ಇಳಿಯದೇ ನಾವು ನಾವಾಗುವ ಬಗೆ......#ವೆಂಕಟೇಶಸಂಪ

ಏರಿಸಿದಾಗ ಏರದೇ, ಇಳಿಸಿದಾಗ ಇಳಿಯದೇ ನಾವು ನಾವಾಗುವ ಬಗೆ......
#ವೆಂಕಟೇಶಸಂಪ

ಆವತ್ತು ಒಬ್ಬ ಬಂದ, ನೀ ಸಿಕ್ಕಾಪಟ್ಟೆ ಗ್ರೇಟ್ ಅಣ್ಣಾ ಚಿಕ್ಕ ವಯಸ್ಸಲ್ಲಿ ದೊಡ್ಡ ಸಾಧನೆ ಮಾಡಿದಿಯಾ, ಕಷ್ಟಪಟ್ಟು ಬೆಳೆದಿದಿಯಾ,ಅಂತಹ ಹಳ್ಳಿಯಿಂದ ಬಂದು ರಾಜ್ಯಮಟ್ಟದ ಪತ್ರಿಕೆ ಮಾಡಿದಿಯಾ, ಒಳ್ಳೋಳ್ಳೆ ಕಾಂಟ್ಯಾಕ್ಟ್ ಇಟ್ಟಿದಿಯಾ,ಒಳ್ಳೆ ಹವ್ಯಾಸ ಇದೆ.  ನಿಮ್ಮಂತವರ ಸ್ನೇಹ ನಂಗೆ ಬಹಳ ಮುಖ್ಯ. ಅಂದ....!
ನಾನು ಥ್ಯಾಂಕ್ಸ್ ಅಷ್ಟೆ ಅಂದೆ....!
ಒಂದು ಹದಿನೈದು ದಿನ ಕಳೆದಿರಬಹುದು ಆತ ಮತ್ತೆ ಸಿಕ್ಕ...ನೀ ಸರಿ ಇಲ್ವಂತೆ... ಸಿಕ್ಕಾಪಟ್ಟೆ ದುಡ್ಡು ಮಾಡಿದೀಯಂತೆ,ಬಹಳ ಜನ ಫ್ರೆಂಡ್ಸಂತೆ, ಕುಡಿತದ ಚಟ ಕೂಡ ಇದೆಯಂತೆ ,ಒಟ್ಟಿನಲ್ಲಿ ನೀ ಸರಿ ಇಲ್ವಂತೆ ಅಂದ....!ನಾನು ಥ್ಯಾಂಕ್ಸ್ ಅಷ್ಟೇ ಅಂದೆ.!
ತಿಂಗಳು ಕಳೆದಿರಬಹುದು ಮತ್ತೆ ಸಿಕ್ಕಿದ್ದ.....!
ಸಾರಿ ಅಣ್ಣಾ,ಯಾರೋ ನಿನ್ನ ಬಗ್ಗೆ ಹಾಗೆಲ್ಲಾ ಅಂದ್ರು ನಾನೂ ಕೆಟ್ಟದಾಗಿ ಯೋಚಿಸಿಬಿಟ್ಟೆ...! ಮತ್ತಿನ್ಯಾರೋ ನಿನ್ನ ಬಗ್ಗೆ ಹೇಳಿದ್ರು ನೀನು ಸಿಕ್ಕಾಪಟ್ಟೆ ಗ್ರೇಟ್ ಒಳ್ಳೆಯವನಂತೆ! ಅಂದ.. ಮತ್ತೆ ನಾನು ಥ್ಯಾಂಕ್ಸ್ ಅಷ್ಟೇ ಹೇಳಿದೆ...!

ಈ ಜಗತ್ತಿನಲ್ಲಿ ಯಾವತ್ತೂ ಹೊಗಳಿಕೆಗೆ ಏರಬಾರದು...ತೆಗಳಿಕೆಗೆ ಇಳಿಯಬಾರದು..ಅನ್ನುವುದನ್ನು ಬಹಳ ಹಿಂದೆ ಅನುಭವಿಸಿದ ಅವಮಾನದಲ್ಲಿಯೇ ಕಲಿತವನು ನಾನು.!
ಆತ ಹೊಗಳಿದಾಗ ಏರಲಿಲ್ಲ..ಥ್ಯಾಂಕ್ಸ್ ಅಷ್ಟೆ ಹೇಳಿ ಇಗ್ನೋರ್ ಮಾಡಿದ್ದೆ...ಆತ ತೆಗಳಿದಾಗಲೂ ಅಷ್ಟೇ. ಥ್ಯಾಂಕ್ಸ್ ಅಷ್ಟೇ ಹೇಳಿದೆ....ಒಮ್ಮೆ ಏರಿಸಿದಾಗ ಏರಿ ಇಳಿಸಿದಾಗ ಡಿಪ್ರೆಸ್ ಆದರೆ ಇಡೀ ಜೀವನವೇ ಅಸಹ್ಯವಾಗಿಬಿಡುತ್ತದೆ.! ನಾವು ಏನು ಮತ್ತು ಹೇಗೆ ಅಂತ ಜಗತ್ತಿನ ಮುಂದೆ ತೆರೆದಿಟ್ಟು ತೋರಿಸಿ ಸಾಕ್ಷಿ ಪುರಾವೆ ಸೃಷ್ಟಿಸುವ ಪ್ರಯತ್ನ ಮಾಡಲೇಬಾರದು.! ನಾವು ಒಳ್ಳೆಯವರಾಗಬೇಕಾದ್ದು ನಮಗೇ ವಿನಃ ನೋಡುವವರಿಗಲ್ಲ.! ಜೀವನದಲ್ಲಿಯೇ ಒಂದು ಡ್ರಾಪ್ ಕುಡಿಯದವನಿಗೆ ನೀ ಕುಡಿತೀಯಾ.. ಅಂತ ಯಾವನೋ ಹೇಳಿದರೆ ಸುಮ್ಮನೇ ನಕ್ಕುಬಿಡಬೇಕೇ ವಿನಃ ಸಾಕ್ಷಿ ತೋರಿಸುತ್ತೇನೆಂದು ಕೊಚ್ಚೆಯ ಜೊತೆ ಸಖ್ಯ ಬಯಸಬಾರದು..
ಸಿಕ್ಕಾಪಟ್ಟೆ ದುಡಿಯುವ ವ್ಯಕ್ತಿಗೆ, ಪ್ರಯತ್ನ ಪಟ್ಟು ಬೆಳೆಯುವ ವ್ಯಕ್ತಿಗೆ ಯಾರದರೂ ಸಿಕ್ಕಾಪಟ್ಟೆ ದುಡ್ಡು ಮಾಡ್ತೀಯಾ.. ಅಂದರೆ ಆಗಲೂ ಒಮ್ಮೆ ಸ್ಮೈಲ್ ಕೊಟ್ಟುಬಿಡಿ ಸಾಕು! ಆತನಿಗೆ ನಿನ್ನ ದುಡಿಮೆಯ ಸಿಕ್ರೇಟ್ ಬಿಚ್ಚಿ ತೋರಿಸುವ ಅವಶ್ಯಕತೆ ಖಂಡಿತಾ ಇಲ್ಲ.
 ಹೀಗೆ ಯಾರೋ ಯಾವಾಗಲೋ ನಿನ್ನ ಬಗ್ಗೆ ಒಟಗುಟ್ಟುವವನನ್ನು  ನಿರ್ಲಕ್ಷಿಸಬೇಕು..ಆತನ ವರ್ತನೆ ತೀರಾ ಅತಿರೇಕವಾದಾಗ ಮುಲಾಜಿಲ್ಲದೆ ಅಂತವನ ಪರಿಚಯವನ್ನೇ ಕಳೆದುಕೊಳ್ಳಬೇಕು.. ಯಾಕೆಂದರೆ ಹೇಸಿಗೆಯ ಜೊತೆ ಸ್ನೇಹಕ್ಕಿಂತ ಪರಿಮಳದ ಜೊತೆ ಗುದ್ದಾಟ ಸಂತೋಷವನ್ನು ನೀಡಬಲ್ಲದು...!

ಏರಿಸಿದವ,ಕೀಳಾಗಿ ಕಂಡವ ಯಾರೂ ನಮ್ಮವರಲ್ಲ.  ನಮ್ಮ ಜೊತೆ ನಾವು ದಿನದ 24 ಗಂಟೆ ವರ್ಷದ ಮುನ್ನೂರಾರವತ್ತೈದು     ದಿವಸ ಜೀವನ ಪೂರ್ತಿ ಇರಲೇಬೇಕು ನೋಡಿ ಹಾಗಾಗಿ ನಮ್ಮನ್ನು ನಾವು ಪ್ರೀತಿಸಿಕೊಳ್ಳಬೇಕು ಮತ್ತು ನಮಗೆ ನಾವು ಒಳ್ಳೆಯವರಾಗಿರಬೇಕು...!

ನಾವು ನಾವಾಗೋಣ...ನಮ್ಮನ್ನು ಪ್ರೀತಿಸುವವರನ್ನು ಪ್ರೀತಿಸೋಣ... ನಿರ್ಲಕ್ಷಿಸುವವರನ್ನು ತಿರಸ್ಕರಿಸೋಣ....
ಗಟ್ಟಿ ಮನಸ್ಸಿನ ಸ್ಥಿತಪ್ರಜ್ಞತೆಯ ಜೀವನ ಸಾಗಿಸೋಣ..
ವೆಂಕಟೇಶ ಸಂಪ ಓದಿಸಂಪದಸಾಲುಪತ್ರಿಕೆ
9448219347
sampadasaalu@gmail.com sampadasaalu.blogspot.com

No comments:

Daily News and News Analysis (ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ )

ರಾಷ್ಟ್ರ,ಅಂತರಾಷ್ಟ್ರ ಹಾಗು ರಾಜ್ಯದ ದಿನದ ಸುದ್ದಿ ಹಾಗು ಸುದ್ದಿ ವಿಶ್ಲೇಷಣೆ ನಮ್ಮ ಸಂಪದ saalu